ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ತಾಲೂಕು ಆಡಳಿತ ಸೌಧದಲ್ಲಿ ತಹಸೀಲ್ದಾರ ಕಚೇರಿ ಸಭಾಂಗಣದಲ್ಲಿ ಹುಬ್ಬಳ್ಳಿ (ಗ್ರಾಮೀಣ), ಹುಬ್ಬಳ್ಳಿ (ಶಹರ), ಅಣ್ಣಿಗೇರಿ ಮತ್ತು ಕುಂದಗೋಳ ತಾಲೂಕು ಮರಳು ಉಸ್ತುವಾರಿ ಸಮಿತಿಯ ಸಭೆ ಶುಕ್ರವಾರ ನಡೆಯಿತು.
ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2023ರ ನಿಯಮ 31(ಖ)ರಲ್ಲಿ ತಿಳಿಸಿರುವಂತೆ ತಾಲೂಕು ಮರಳು ಸಮಿತಿಯ ಕಾರ್ಯ ವ್ಯಾಪ್ತಿಯ ಕಾರ್ಯಗಳು, ಹುಬ್ಬಳ್ಳಿ-ಧಾರವಾಡ ಮಹಾ ನಗರಗಳಲ್ಲಿ ಅನಧಿಕೃತ ಮರಳು ದಾಸ್ತಾನು ವಿಲೇವಾರಿ, ನೆರೆ ಜಿಲ್ಲೆಗಳಿಂದ ಮರಳು ಸಾಗಾಣಿಕೆ ಕುರಿತು ವಿತರಿಸುತ್ತಿರುವ ಪರವಾನಿಗೆಗಳ ಅವಧಿ, ಮಾರ್ಗ ಮತ್ತು ತಲುಪಬೇಕಾದ ಸ್ಥಳದ ಚರ್ಚೆ, ಮರಳು ತೊಳೆಯುವ ಅಡ್ಡೆಗಳ, ಪಟ್ಟಾ ಜಮೀನು ಸೇರಿದಂತೆ ಯಾವುದೇ ವರ್ಗದ ಭೂಮಿಯಲ್ಲಿ ಫಿಲ್ಟರ್ ಮರಳು ಗಣಿಗಾರಿಕೆ, ಉತ್ಪಾದನೆ, ದಾಸ್ತಾನು ಹಾಗೂ ಮಾರಾಟ ನಿಯಮಗಳಲ್ಲಿ ನಿಷೇಧ, ಜಿಲ್ಲೆಯಲ್ಲಿ ಯಾವುದೇ ನದಿ ಪಾತ್ರಗಳು ಇಲ್ಲದಿರುವುದರಿಂದ ಹಳ್ಳ-ಕೊಳ್ಳದಲ್ಲಿ ಲಭ್ಯವಿರುವ ಮರಳಿನ ನಿಕ್ಷೇಪಗಳನ್ನು ಗುರುತಿಸುವಿಕೆ, ಅನಧಿಕೃತ ಮರಳು ಸಾಗಾಣಿಕೆಯ ಕುರಿತು ನಿಗಾ ವಹಿಸುವ ನಿಟ್ಟಿನಲ್ಲಿ ಸದಸ್ಯ ಇಲಾಖೆಯವರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಸೀಲ್ದಾರರಾದ ಕಲಗೌಡ ಪಾಟೀಲ, ಜೆ.ಬಿ. ಮಜ್ಜಗಿ, ರಾಜು ಮಾವರಕರ, ಎಂ.ಜಿ. ದಾಸಪ್ಪನವರ, ಲೋಕೋಪಯೋಗಿ ಇಲಾಖೆಯ ಎಇಇ ಸುಧಾಕರ ಬಾಗೇವಾಡಿ, ಎಇ ಲಲಿತಾ ಗೌಡರ, ಪ್ರಾದೇಶಿಕ ಅರಣ್ಯಾಧಿಕಾರಿ ಆರ್.ಎಸ್. ಉಪ್ಪಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಳೆಯ ಕಛೇರಿ ಆವರಣದಲ್ಲಿನ (ಜಿಲ್ಲಾ ಪಂಚಾಯತ್ ಧಾರವಾಡ) ದಾಸ್ತಾನಿರುವ ಮರಳನ್ನು ವಿಲೇವಾರಿ ಹಾಗೂ ಶ್ರೀ ತುಂಗಭದ್ರ ಮರಳು ಲಾರಿ ಮಾಲೀಕರ ಸಂಘ, ಹುಬ್ಬಳ್ಳಿ ಜಿಲ್ಲೆಯಲ್ಲಿ ಮರಳು ಸಾಗಾಣಿಕೆ ವಾಹನಗಳನ್ನು ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2023ರ ನಿಯಮ 31-ಖಿ(೧೧)ರ ಪ್ರಕಾರ ನಿಯಮದಲ್ಲಿರುವಂತೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅನುಮತಿ ನೀಡುವಂತೆ ಕೋರಿದ ಮನವಿ ಕುರಿತ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.