ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯರ ಪ್ರತಿಯೊಂದು ಹಬ್ಬಗಳು ತಮ್ಮದೇ ಆದ ವಿಶೇಷತೆ ಹೊಂದಿರುವಂತೆ, ಮಕರ ಸಂಕ್ರಾಂತಿ ಕೂಡ ವಿಶಿಷ್ಟ ಹಬ್ಬವಾಗಿದೆ. ಮಕರ ಸಂಕ್ರಾಂತಿ ಹಬ್ಬವು ಜನತೆಯನ್ನು ಔದ್ಯೋಗಿಕ, ಧಾರ್ಮಿಕ ಸಾಮಾಜಿಕ, ಪಾರಂಪರಿಕವಾಗಿ ಪರಿವರ್ತಿಸುವ ಜೊತೆಗೆ ಆರೋಗ್ಯದ ಪರಿಕಲ್ಪನೆಯನ್ನು ಮೂಡಿಸುವುದು. ಸಂಕ್ರಾಂತಿ ಹಬ್ಬದ ದಿನ ಕೆಲವರು ಪುಣ್ಯ ಕ್ಷೇತ್ರಗಳಿಗೆ ಪ್ರಯಾಣ ಮಾಡಿದರೆ ಇನ್ನೂ ಕೆಲವರು ನದಿ, ಕೆರೆ, ಇನ್ನಿತರೆ ತೀರ್ಥ ಕ್ಷೇತ್ರಗಳಲ್ಲಿ ಪುಣ್ಯ ಸ್ನಾನ ಮಾಡುವರು. ಈ ಹಿನ್ನೆಲೆಯಲ್ಲಿ ಮಹಿಳೆಯರ ಮನೋಲಾಸಕ್ಕೆ ಮರಕ ಸಂಕ್ರಾಂತಿ ಹಬ್ಬ ಸಹಕಾರಿಯಾಗಿದೆ ಎಂದು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರ ತಿಳಿಸಿದರು.
ಮಕರ ಸಂಕ್ರಾತಿ ಪ್ರಯುಕ್ತ ಸಿದ್ಧಲಿಂಗ ನಗರದಲ್ಲಿನ ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಬಸವ ಯೋಗ ಮಂದಿರದಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ಜನರು ವಾಟ್ಸಾಪ್ ಮೂಲಕ ಹಬ್ಬಗಳ ಶುಭಾಶಯ ಹೇಳುವುದು ರೂಢಿಯಾಗಿದೆ. ಇದರಿಂದ ಪರಸ್ಪರರಲ್ಲಿ ಪ್ರೀತಿ, ಅನ್ಯೋನ್ಯ ಭಾವ ಬೆಳೆಯುವುದಿಲ್ಲ. ನಮ್ಮ ಪೂರ್ವಜರು `ಎಳ್ಳು ಬೆಲ್ಲ ತೊಗೊಳ್ಳಿ, ಒಳ್ಳೆಯವರಾಗಿ ಇರೋಣ’ ಎಂದು ಸಮಕ್ಷಮವಾಗಿ ಹೇಳುವ ಶುಭಾಶಯ ಮನಕ್ಕೆ ಋಷಿ ತರುವದಲ್ಲದೆ ಪ್ರೀತಿ, ವಿಶ್ವಾಸ, ಬಾಂಧವ್ಯ, ಭಾವಗಳು ಹೆಚ್ಚುವವು. ಇಂದಿನ ಮಕ್ಕಳು ಮತ್ತು ಯುವಜನತೆಯಲ್ಲಿ ಈ ಅರಿವನ್ನು ಮೂಡಿಸುವದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಎಂ.ವಿ. ಐಹೊಳ್ಳಿ ಮಾತನಾಡುತ್ತ, ಸಂಕ್ರಾAತಿ ನಿಮಿತ್ತ ಅವರವರ ಮನೆಯಲ್ಲಿ ತಯಾರಿಸಿದ ಆಹಾರ ತಂದು ಆತ್ಮೀಯರೊಡಗೂಡಿ ಸಹಭೊಜನ ಮಾಡುವುದು ಸಾಮರಸ್ಯದ ಸಂಕೇತವಾಗಿದೆ ಎಂದರು.
ಜಯಶ್ರೀ ವಸ್ತ್ರದ, ಪಲ್ಲವಿ ಐಹೊಳ್ಳಿ, ಲಲಿತಾ ಅಣ್ಣಿಗೇರಿ, ಸುಲೋಚನಾ ಐಹೊಳ್ಳಿ, ವಿಜಯಾ ಚನ್ನಶೆಟ್ಟಿ, ಪ್ರತಿಭಾ ಇನಾಮತಿ, ಜಯಶ್ರೀ ಡಾವಣಗೇರಿ, ಸುನಂದಾ ಜ್ಯಾನೋಪಂತರ, ಪುಷ್ಪಾ ಹಿರೇಮಠ, ಮಹಾದೇವಿ ಚರಂತಿಮಠ, ಕಸ್ತೂರಿ ಮರಿಗೌಡರ, ಶಕುಂತಲಾ ಬ್ಯಾಳಿ, ಶೋಭಾ ಭಾಂಡಗೆ ಪಾಲ್ಗೊಂಡಿದ್ದರು.
ವೀಣಾ ಗೌಡರ ಸ್ವಾಗತಿಸಿದರು. ಗಂಗಮ್ಮ ಹುಚ್ಚಣ್ಣವರ ವಂದಿಸಿದರು. ಯೋಗ ಪಾಠಶಾಲೆ ಸಂಚಾಲಕ ಕೆ.ಎಸ್. ಪಲ್ಲದ ಕಾರ್ಯಕ್ರಮಗಳ ಮಾರ್ಗದರ್ಶನ ನೀಡಿದರು.
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಂಗವಾಗಿ ಮಹಿಳೆಯರಿಗಾಗಿ ಆಯೋಜಿಸಿದ ವಿವಿಧ ಮನೋಲಾಸ ಕ್ರೀಡೆಗಳ ನಿರ್ಣಾಯಕರಾಗಿ ಆಗಮಿಸಿದ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಬಿ. ಗೌಡರ ಮಾತನಾಡಿ, ಮಹಿಳೆಯರ ದೈಹಿಕ, ಮಾನಸಿಕ, ಆರೋಗ್ಯಕ್ಕೆ ಕ್ರೀಡೆಗಳು ಭದ್ರ ಬುನಾದಿಯಾಗಿವೆ. ಅದರಲ್ಲೂ ಮನೋಲಾಸ ಕ್ರೀಡೆಗಳು ಹೆಚ್ಚು ಉಪಯುಕ್ತವಾಗಿವೆ ಎಂದು ತಿಳಿಸಿದರು.