ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ನಾಡಿನ ಐತಿಹಾಸಿಕ ಪರಂಪರೆಯಲ್ಲಿ ಸಾಧುಗಳು, ಸಂತರು, ಶರಣರು, ಋಷಿಮುನಿಗಳು, ಮಠಾಧೀಶರು ತಮ್ಮ ತಪಃಶಕ್ತಿ, ಸಂಕಲ್ಪ, ಜ್ಞಾನ, ಅನುಭಾವಗಳಿಂದ ಸಮಾಜಸೇವೆ, ತ್ರಿವಿಧ ದಾಸೋಹದ ಮೂಲಕ ಲೋಕ ಕಲ್ಯಾಣಕ್ಕಾಗಿ ಸಮರ್ಪಿಸಿಕೊಂಡಿದ್ದಾರೆ. ಇದಕ್ಕೆ ಲಕ್ಮೇಶ್ವರ ಸಮೀಪದ ಹೂವಿನಶಿಗ್ಲಿ ವಿರಕ್ತಮಠ ಸಾಕ್ಷಿಯಾಗಿದೆ.
ಲಿಂ. ನಿರಂಜನ ಮಹಾಸ್ವಾಮಿಗಳು ಬಸವನಾಡು ಬೀದರ ಜಿಲ್ಲೆ ಔರಾದ್ ತಾಲೂಕಿನ ಸೋನಾಳ ಗ್ರಾಮದಿಂದ 1996ರಲ್ಲಿ ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಆಗಮಿಸಿದ್ದರು. ಈ ವೇಳೆ ಅವರಿಗೆ ಸ್ವಪ್ನವೊಂದು ಬಿದ್ದು, ಹೂವಿನ ಶಿಗ್ಲಿಯಲ್ಲಿನ ಪಾಳು ಬಿದ್ದಿರುವ ಮಠವನ್ನು ಉದ್ಧರಿಸು ಎಂಬ ವಾಣಿಯನ್ವಯ ಕಲ್ಲು ಮುಳ್ಳುಗಳಿಂದ ಕೂಡಿದ, ಶಿಥಿಲಾವಸ್ಥೆಯ ಚಿಕ್ಕ ಗುಡಿಯಲ್ಲಿ ನೆಲೆನಿಂತ ಶ್ರೀಗಳು ತಮ್ಮ ಸಂಕಲ್ಪ ಶಕ್ತಿಯಿಂದ ಈ ಸ್ಥಳವನ್ನು ಜೀರ್ಣೋದ್ಧಾರಗೊಳಿಸಿದರು. ನಿತ್ಯ ಧರ್ಮ, ಸಂಸ್ಕೃತಿ, ಸಾಹಿತ್ಯ, ಶಿಕ್ಷಣ, ಪೂಜೆ, ಬಸವತತ್ವ ಪ್ರಚಾರ, ಯೋಗ, ಆಯುರ್ವೇದ ಶಾಸ್ತçಗಳ ಮೂಲಕ ಕ್ಷೇತ್ರವನ್ನು ಬೆಳೆಸಿದರು. ಆಯುರ್ವೇದ ಔಷಧಿ ಸಿದ್ಧಪಡಿಸಿ ಮಾರಕ ರೋಗಗಳಿಗೆ ದಿವ್ಯೌಷಧಿ ನೀಡಿ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದರು.
ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳ ನೆಚ್ಚಿನ ಶಿಷ್ಯರಾಗಿದ್ದ ಲಿಂ. ನಿರಂಜನ ಶ್ರೀಗಳು ಅವರಂತೆಯೇ ಗ್ರಾಮೀಣ ಪ್ರದೇಶಗಳ ಬಡ, ಅನಾಥ ಮಕ್ಕಳಿಗೆ ತ್ರಿವಿಧ ದಾಸೋಹ ಸೇವೆಯ ಮೂಲಕ ಗುರುಕುಲ ಶಿಕ್ಷಣ ಆರಂಭಿಸಿ ಬಡ ಮಕ್ಕಳ ಆಶಾಕಿರಣವೇ ಆಗಿದ್ದರು. ಹೂವಿನ ಶಿಗ್ಲಿ ಅಷ್ಟೇ ಅಲ್ಲದೇ ಹುಟ್ಟೂರು ಸೋನಾಳ, ಆಂದ್ರದ ನಾಗನೂರ, ಶಿರಹಟ್ಟಿ ತಾಲೂಕಿನ ಕೊಂಚಿಗೇರಿ, ಹಾವೇರಿ ತಾಲೂಕಿನ ಸೋಮನಕಟ್ಟಿಯಲ್ಲಿ ಶಾಖಾಮಠ ಸ್ಥಾಪಿಸಿ ಜನಸೇವೆಯ ಮೂಲಕ ಹೆಸರಾದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿವರ್ಷ ಸಂಕ್ರಾAತಿಗೆ ನಾಡಿನ ಹರಗುರುಚರ ಮೂರ್ತಿಗಳ ಸಮ್ಮುಖದಲ್ಲಿ ಕ್ಷೇತ್ರದಲ್ಲಿ ಜಾತ್ರಾಮಹೋತ್ಸವ ನಿಮಿತ್ತ ವಿವಿಧ ಸಾಮಾಜಿಕ, ಧಾರ್ಮಿಕ, ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸುತ್ತಿದ್ದರು.
ನಿರಂಜನ ಮಹಾಸ್ವಾಮಿಗಳು 2011ರಲ್ಲಿ ಲಿಂಗೈಕ್ಯರಾದ ಬಳಿಕ ಶ್ರೀಮಠದ ಸಂಪೂರ್ಣ ಜವಾಬ್ದಾರಿ ಹೊತ್ತ ಹಾವೇರಿ ತಾಲೂಕಿನ ಮರೋಳ ಗ್ರಾಮದ ಚನ್ನವೀರ ಶ್ರೀಗಳು ಶ್ರೀಮಠ ಮತ್ತು ಗುರುಕುಲವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಶ್ರೀಗುರು ನಿರಂಜನ ಪೂರ್ವ ಪ್ರಾಥಮಿಕ ಕನ್ನಡ ಶಾಲೆ, ಶ್ರೀ ಗುರುಕುಲ ವಸತಿ ಪ್ರಾಥಮಿಕ ಶಾಲೆ, ಶ್ರೀ ಗುರುಕುಲ ವಸತಿ ಪ್ರೌಢಶಾಲೆ ಆರಂಭಿಸಿದ ಪೂಜ್ಯರು ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ವ್ಯವಹಾರಿಕ ಯುಗದಲ್ಲಿ ಕಮರ್ಷಿಯಲ್ ಆಗದೇ, ಸೇವೆಯಾಗಿಯೇ ಮುಂದುವರೆದದ್ದು, ಶ್ರೀ ನಿರಂಜನ ಸ್ವಾಮೀಜಿ (ಬಾಬಾನಂದರು) ಹಾಗೂ ಈಗಿನ ಮಠಾಧೀಶರಾದ ಶ್ರೀ ಚನ್ನವೀರ ಸ್ವಾಮೀಜಿ ಅವರಿಗೆ ಸಲ್ಲುವ ಶ್ರೇಯಸ್ಸು. ಉತ್ತರ ಕರ್ನಾಟಕದ ಸಿದ್ಧಗಂಗೆಯಾಗಿರುವ ಈ ಗುರುಕುಲದಲ್ಲಿ ಬಡ, ಅನಾಥರು ಸೇರಿ 400ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದು, ಅವರಿಗೆ ಶಿಕ್ಷಣದೊಂದಿಗೆ ಧರ್ಮ, ಸಂಸ್ಕೃತಿ, ಸಂಸ್ಕಾರ ಮತ್ತು ವೇದಾಧ್ಯಯನ ನೀಡಿ ಲಿಂ.ಶ್ರೀಗಳ ಮಾರ್ಗದಲ್ಲಿ ಮಠವನ್ನು ವಿಶಿಷ್ಟ ಜಾಗೃತ ಕೇಂದ್ರವನ್ನಾಗಿಸುವತ್ತ ಸಾಗಿದ್ದಾರೆ. ಬಡ ಹಾಗೂ ನಿರ್ಗತಿಕ ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತ ಅನೇಕರ ಬಾಳನ್ನು ಬೆಳಗುವ ನಂದಾದೀಪವಾಗಿದ್ದಾರೆ.
ಅಲ್ಲದೇ ಅವರು ತಮ್ಮ ಪ್ರವಚನದ ಮೂಲಕ ನಾಡಿನಾದ್ಯಂತ ಭಕ್ತ ಸಂಕುಲದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸರ್ಕಾರದ ಅನುದಾನವಿಲ್ಲದೇ ನಿತ್ಯ ನೂರಾರು ವಿದ್ಯಾರ್ಥಿಗಳಿಗೆ ಅನ್ನದಾಸೋಹದೊಂದಿಗೆ ಶಿಕ್ಷಣ ದಾಸೋಹ ಸಾಂಗವಾಗಿ ಶ್ರೀಗಳ ಆಣತಿಯಂತೆ ನಡೆದಿದೆ.
ಜ. 13ರಿಂದ 3 ದಿನಗಳ ಕಾಲ ಹೂವಿನ ಶಿಗ್ಲಿಯ ವಿರಕ್ತಮಠದ 46ನೇ ಜಾತ್ರಾ ಮಹೋತ್ಸವ, ಲಿಂ.ನಿರAಜನ ಮಹಾಸ್ವಾಮಿಗಳವರ 15ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಪುರಾಣ ಪ್ರವಚನ, ಲಿಂಗದೀಕ್ಷೆ, ಸಾಮೂಹಿಕ ವಿವಾಹ, ತುಲಾಭಾರ ಸೇವೆ, ಧರ್ಮಸಭೆ,ಮಹಾತ್ಮರ ಬದುಕು-ಬೆಳಕು ಚಿಂತನಗೋಷ್ಠಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಪ್ರತಿವರ್ಷದಂತೆ ಈ ವರ್ಷವೂ ಜ.13ರಿಂದ 15ವರೆಗೆ ನಾಡಿನ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಅನ್ನದಾಸೋಹ, ಜ್ಞಾನ ದಾಸೋಹದ ಜಾತ್ರಾ ಮಹೋತ್ಸವ ಮತ್ತು ಲಿಂ.ಶ್ರೀಗಳ ಪುಣ್ಯಸ್ಮರಣೋತ್ಸವ ಆಚರಿಸಲಾಗುತ್ತದೆ. `ಖಡಕ್ ರೊಟ್ಟಿ ಪ್ರಸಾದವೇ ಈ ಜಾತ್ರೆಯ ವೈಶಿಷ್ಟ್ರಯವಾಗಿದೆ. ಜಾತ್ರೆಗೆ ಹೂವಿನ ಶಿಗ್ಲಿ ಸೇರಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಶ್ರೀಮಠಕ್ಕೆ ರೊಟ್ಟಿ ಸೇರಿ ಇತರೇ ಆಹಾರ ಧಾನ್ಯಗಳನ್ನು ಸಮರ್ಪಿಸುತ್ತಾರೆ.