ಚೆನ್ನೈ: ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ ಕೆ ಶಶಿಕಲಾ ಮಂಗಳವಾರ ಹೊಸ ದ್ರಾವಿಡ ಪಕ್ಷವನ್ನು ರಚಿಸುವುದಾಗಿ ಘೋಷಿಸಿದ್ದಾರೆ. ಇದೇ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಈ ಘೋಷಣೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ 78ನೇ ಜನ್ಮ ದಿನಾಚರಣೆಯಂದು ಶಶಿಕಲಾ ಹೊಸ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದರು. ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಸಂಯೋಜನೆಯ ಈ ಧ್ವಜದಲ್ಲಿ ಸಿ ಎನ್ ಅಣ್ಣಾದೊರೈ, ಎಂ ಜಿ ರಾಮಚಂದ್ರನ್ ಮತ್ತು ಜಯಲಲಿತಾ ಅವರ ಚಿತ್ರಗಳಿವೆ.
ಪಕ್ಷದ ಹೆಸರು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಿಳಿಸಿದ ಶಶಿಕಲಾ, ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. “ನನಗೆ ದ್ರೋಹ ಮಾಡಲಾಗಿದೆ. ಅವರ ನಾಯಕತ್ವದಲ್ಲಿ ಪಕ್ಷ ಅವನತಿ ಕಂಡಿದೆ” ಎಂದು ಆರೋಪಿಸಿದರು.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಬಳಿಕ ಪಕ್ಷದಿಂದ ಹೊರಹಾಕಲ್ಪಟ್ಟಿದ್ದ ಶಶಿಕಲಾ, “ನಾನು ಕಳೆದ 9 ವರ್ಷ ಮೌನವಾಗಿದ್ದರೆ ಅದು ತಮಿಳುನಾಡಿನ ಜನರಿಗೆ ದ್ರೋಹವಾಗುತ್ತಿತ್ತು. ಕಾರ್ಯಕರ್ತರು ಮತ್ತು ಜನರಿಗಾಗಿ ಹೊಸ ಪಯಣ ಆರಂಭಿಸುತ್ತಿದ್ದೇವೆ” ಎಂದು ಹೇಳಿದರು.
2026ರ ಮೊದಲಾರ್ಧದಲ್ಲಿ 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿವೆ. ಜೈಲು ಅವಧಿಯಲ್ಲಿ ಪೆರೋಲ್ ಕಡಿತ ಮಾಡಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದರು. “ನಾನು ಮುಖ್ಯಮಂತ್ರಿಯನ್ನಾಗಿ ಮಾಡಿದ ವ್ಯಕ್ತಿಯೇ ನನ್ನ ಬೆನ್ನಿಗೆ ಇರಿದಿದ್ದ” ಎಂದು ಕಿಡಿಕಾರಿದರು.



