ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ನಿವಾಸಿ, ನರಗುಂದ ತಾಲೂಕಿನ ಸುರಕೋಡ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕಿ ಶಶಿಕಲಾ ಕುಲಕರ್ಣಿಯವರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ದೊರಕಿದೆ. ಬೆಂಗಳೂರಿನಲ್ಲಿ ಈಚೆಗೆ ಜರುಗಿದ ಸಮಾರಂಭದಲ್ಲಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕತೆ, ಕವನ, ಹನಿಗನವಗಳ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶಿಕ್ಷಕಿ ಶಶಿಕಲಾ ಒಬ್ಬ ಉತ್ತಮ ಭಾಷಣಗಾರ್ತಿಯೂ ಆಗಿದ್ದಾರೆ. ಈಗಾಗಲೇ ನಾಡಿನ ಹಲವಾರು ಕಡೆಗಳಲ್ಲಿ ನಡೆದಿರುವ ಜಿಲ್ಲಾ ಮತ್ತು ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಕವನ ವಾಚಿಸಿ ಸೈ ಎನ್ನಿಸಿಕೊಂಡಿರುವುದಲ್ಲದೆ ಅನೇಕ ಪ್ರಶಸ್ತಿ, ಬಹುಮಾನಗಳಿಗೂ ಶಶಿಕಲಾ ಭಾಜನರಾಗಿದ್ದಾರೆ.
ತಮ್ಮ ಈ ಸಾಧನೆಗೆ ಪತಿ ಹೊಂಬಳ ಶಂಕರಲಿಂಗ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸುನಿಲ ಅಂಬೇಕರ ಮತ್ತು ಸಹೋದ್ಯೋಗಿಗಳ ಸಹಕಾರ, ಬೆಂಬಲವೇ ಕಾರಣ ಎನ್ನುವ ಶಿಕ್ಷಕಿ ಶಶಿಕಲಾ, ಮುಂದೊಂದು ದಿನ ಉತ್ತಮ ಕವಿಯಿತ್ರಿಯಾಗುವ ವಿಶ್ವಾಸ ಹೊಂದಿದ್ದಾರೆ. ಶಿಕ್ಷಕಿ ಶಶಿಕಲಾರ ಸಾಧನೆಗೆ ಪಟ್ಟಣದ ಶ್ರೀ ದತ್ತ ಭಕ್ತ ಮಂಡಳಿಯ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ ಮತ್ತು ಬ್ರಹ್ಮ ಸಮಾಜ ಅಭಿನಂದನೆ ಸಲ್ಲಿಸಿದೆ.