ಬೆಳಗಾವಿ:- ಮುಖ್ಯಮಂತ್ರಿ ಆಗಿದ್ದವರಿಗೆ ಕನಿಷ್ಟ ಸಾಮಾನ್ಯ ಜ್ಞಾನವಾದರೂ ಇರಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾಗಿರುವ ಜಗದೀಶ್ ಶೆಟ್ಟರ್ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ ಹೊರ ಹಾಕಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಿ, ಅನುದಾನ ತಂದವರು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ. ಆದರೆ, ಇದಕ್ಕೆಲ್ಲ ತಾವೇ ಕಾರಣ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿಕೊಳ್ಳುತ್ತಿದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದ ವ್ಯಕ್ತಿ. ಕನಿಷ್ಠ ಸಾಮಾನ್ಯ ಜ್ಞಾನವಾದರೂ ಇರಬೇಕಿತ್ತು’ ಎಂದು ಹೆಬ್ಬಾಳಕರ್ ಆರೋಪಿಸಿದರು.
‘ಇವರು ಸಂಸದರಾದ ತಕ್ಷಣ ಒಂದು ಪತ್ರ ಕೊಟ್ಟರಂತೆ, ಅದಕ್ಕೆ ಅನುದಾನ ಬಂದಿದೆ ಅಂತೆ. ಇವರ ಪತ್ರಕ್ಕೆ ಯಾರಾದರೂ ನೂರಾರು ಕೋಟಿ ಕೊಟ್ಟುಬಿಡುತ್ತಾರೆಯೇ? ಬಾಯಿ ಇದೆ ಎಂದು ಏನೇನೋ ಮಾತನಾಡಬಾರದು. ಅವರಿಗೆ ತಾಕತ್ತಿದ್ದರೆ ಜಿಲ್ಲೆಯಲ್ಲಿ ಸಾಕಷ್ಟು ದೇವಸ್ಥಾನಗಳಿವೆ, ಅನುದಾನ ತಂದು ಅಭಿವೃದ್ಧಿ ಮಾಡಿ ತೋರಿಸಲಿ’ ಎಂದು ಸವಾಲು ಹಾಕಿದರು.
ಸವದತ್ತಿ ಯಲ್ಲಮ್ಮ ಎಚ್.ಕೆ.ಪಾಟೀಲ ಅವರ ಮನೆದೇವರು. ಅಭಿವೃದ್ಧಿಗೆ ಯೋಜನೆ ರೂಪಿಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಸಾಕಷ್ಟು ಪ್ರಯತ್ನಿಸಿದ್ದಾರೆ. ಅವರ ಪ್ರಯತ್ನದಿಂದ ಅನುದಾನ ಬಂದಿದೆ. ಅದರ ಸಂಪೂರ್ಣ ಶ್ರೇಯಸ್ಸು ಎಚ್.ಕೆ.ಪಾಟೀಲ ಅವರಿಗೆ ಸಲ್ಲಬೇಕು ವಿನಹ ಶೆಟ್ಟರ್ಗೆ ಅಲ್ಲ’ ಎಂದು ಹೇಳಿದರು.
ಇನ್ನೂ ಹಿಡಕಲ್ ಜಲಾಶಯದಿಂದ ಧಾರವಾಡದ ಕೈಗಾರಿಕೆ ಪ್ರದೇಶಕ್ಕೆ ನೀರು ಒಯ್ಯುವ ಯೋಜನೆಗೂ, ನಾವು ಧಾರವಾಡದಲ್ಲಿ ತೆರೆಯುತ್ತಿರುವ ‘ಮೃಣಾಲ್ ಶುಗರ್ಸ್’ಗೂ ಯಾವುದೇ ಸಂಬಂಧವಿಲ್ಲ. ವಿನಾಕಾರಣ ಇದನ್ನು ನನ್ನ ತಲೆಗೆ ಕಟ್ಟುತ್ತಿದ್ದಾರೆ’ ಎಂದು ಲಕ್ಷ್ಮೀ ಸ್ಪಷ್ಟಪಡಿಸಿದರು.