ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪರಿಸರವಿಲ್ಲದೆ ಮನುಷ್ಯ ಬದುಕಲಾರ. ಪರಿಸರದೊಂದಿಗೆ ಅವನದು ಅವಿನಾಭಾವ ಸಂಬಂಧ. ನಮ್ಮೆಲ್ಲರ ನೆಮ್ಮದಿಯ ಭವಿಷ್ಯಕ್ಕಾಗಿ ಎಲ್ಲರೂ ಪರಿಸರವನ್ನು ಉಳಿಸಿ, ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ.ಎಸ್. ಧಡೆಸೂರಮಠ ಹೇಳಿದರು.
ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಾವು ಪರಿಸರಕ್ಕೆ ಏನನ್ನು ಕೊಡುತ್ತೇವೆಯೋ ಅದೇ ನಮಗೆ ಮರಳಿ ಬರುವುದು. ಅಂದರೆ, ನಾವು ಪರಿಸರಕ್ಕೆ ಒಳಿತು ಮಾಡಿದರೆ ಪ್ರಕೃತಿಯು ನಮಗೊಲಿಯುತ್ತದೆ. ಕೇಡು ಬಯಸಿದರೆ, ಅದೇ ಪ್ರಕೃತಿಯ ರೌದ್ರಾವತಾರವನ್ನು ಕಾಣಬಹುದಾಗಿದ್ದು, ಆಯ್ಕೆ ನಮ್ಮದಾಗಿದೆ. ಅದಕ್ಕಾಗಿ ಪರಿಸರ ಕಾಪಾಡುವ ಕಾರ್ಯವಾಗಬೇಕಿದೆ ಎಂದರು.
ಕಾಲೇಜು ಅಭಿವೃದ್ಧಿ ಸದಸ್ಯ ಹಾಗೂ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತಪ್ಪ ಅಬ್ಬಿಗೇರಿ ಮಾತನಾಡಿ, ಕೃಷಿ, ಪರಿಸರವನ್ನು ಅರ್ಥ ಮಾಡಿಕೊಂಡು ಅದರ ಉಳಿವಿಗಾಗಿ ಎಲ್ಲರೂ ಕೈಜೋಡಿಸಿದಾಗ ಮಾತ್ರ ಮುಂದಿನ ದಿನಗಳಲ್ಲಿ ನೆಲ-ಜಲವನ್ನು ಸಂರಕ್ಷಣೆ ಮಾಡಲು ಸಾಧ್ಯ. ಭೂಮಿಯ ಪ್ರತಿಯೊಂದು ಘಟಕವೂ ಸಹ ಭೌತಿಕ ಪರಿಸರದ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಎಲ್ಲರೂ ಸಸಿ ನೆಡುವುದು, ನೆಟ್ಟ ಸಸಿಗಳನ್ನು ಪೋಷಿಸಿ ಬೆಳೆಸುವುದು ಹಾಗೂ ವಿದ್ಯಾರ್ಥಿಗಳು ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವಂತೆ ಎಲ್ಲರಲ್ಲೂ ಜಾಗೃತಿ ಮೂಡಿಸುವುದು ಅವಶ್ಯಕ ಎಂದರು.
ಕಾರ್ಯಕ್ರಮಕ್ಕೂ ಮೊದಲು ನಡೆದ ಸಿ.ಡಿ.ಸಿ ಸದಸ್ಯರ ಸಭೆಯಲ್ಲಿ ಕಾಲೇಜು ಪ್ರವೇಶಾತಿ ಹೆಚ್ಚಳ್ಳ, ಮಕ್ಕಳ ಶೈಕ್ಷಣಿಕ ಪ್ರಗತಿ, ಸೌಕರ್ಯಗಳ ಕೊರತೆ, ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಈ ವೇಳೆ ಕಾಲೇಜು ಅಭಿವೃದ್ಧಿ ಸದಸ್ಯರಾದ ಬಸೀರಾಬಾನು ಅಲ್ಲಾಬಕ್ಷಿ ನದಾಫ್, ಶರಣಪ್ಪ ಕುರಿ, ದಾವುದ್ ಅಲಿ ಕುದರಿ, ವೀರಪ್ಪ ಜಿರ್ಲ, ಆನಂದ ನಡುವಲಕೇರಿ, ಕಾಲೇಜಿನ ಸಿಬ್ಬಂದಿಗಳು ಇದ್ದರು.
ಪ್ರಾಂಶುಪಾಲ ಎಸ್.ಎಲ್. ಗುಳೇದಗುಡ್ಡ ಮಾತನಾಡಿ, ಬೀದಿಗಳಲ್ಲಿ ಪ್ಲಾಸ್ಟಿಕ್, ವಾಹನಗಳ ಅತಿಯಾದ ಬಳಕೆಯಿಂದಾಗಿ ಓಝೋನ್ ಪದರದಲ್ಲಿ ರಂಧ್ರವಾಗುತ್ತಿದ್ದು, ಸೂರ್ಯನ ನೇರಳಾತೀತ ಕಿರಣಗಳಿಂದ ಮನುಕುಲಕ್ಕೆ ಕಂಟಕ ಕಾದಿದೆ. ಹೀಗಾಗಿ ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ ಎಂದರು.