ವಿಜಯಸಾಕ್ಷಿ ಸುದ್ದಿ, ಗದಗ : ನೀರು ಜೀವ ಸಂಜೀವಿನಿ. ನಮಗೆ ಲಭ್ಯವಿರುವ ನೀರನ್ನು ಅಗತ್ಯಕ್ಕೆ ಅನುಸಾರವಾಗಿ ಸಂರಕ್ಷಿಸಿ ಮಿತವ್ಯಯದಿಂದ ಬಳಸಿ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ನೀರನ್ನು ಉಳಿಸುವುದೇ ನಮ್ಮ ಗುರಿಯಾಗಿರಲಿ ಎಂದು ಗದಗ-ಬೆಟಗೇರಿ ರೋಟರಿ ಸೆಂಟ್ರಲ್ ಕ್ಲಬ್ ಅಧ್ಯಕ್ಷ ವಿಜಯಕುಮಾರ ಹಿರೇಮಠ ಹೇಳಿದರು.
ಅವರು ಗದಗ-ಬೆಟಗೇರಿ ರೋಟರಿ ಸೆಂಟ್ರಲ್ ಕ್ಲಬ್ ಹಾಗೂ ಇನ್ನರ್ವ್ಹೀಲ್ ಕ್ಲಬ್ ಮಿಡ್ಟೌನ್ನಿಂದ ಜರುಗಿದ ಜಾಗತಿಕ ಜಲ ದಿನ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ನೀರು ಅತ್ಯವಶ್ಯ. ಜೀವದ್ರವ ಎನಿಸಿರುವ ನೀರನ್ನು ಅತ್ಯಂತ ಪ್ರಜ್ಞಾಪೂರ್ವಕವಾಗಿ ಬಳಸಿ ಉಳಿಸಲು ನಾವೆಲ್ಲರೂ ಮುಂದಾಗಬೇಕು ಎಂದರು.
ಇನ್ನರ್ವ್ಹೀಲ್ ಮಿಡ್ಟೌನ್ ಅಧ್ಯಕ್ಷೆ ವಿಜಯಲಕ್ಷ್ಮಿ ಬಿರಾದಾರ ಮಾತನಾಡಿ, ನೀರು ಅತ್ಯವಶ್ಯ ವಸ್ತುವಾಗಿದ್ದು, ಅದರ ಮಹತ್ವವನ್ನು ಸಮುದಾಯಕ್ಕೆ ತಿಳಿಸಿ, ಜನರಲ್ಲಿ ಜಾಗೃತಿ ಮೂಡಿಸಬೇಕಾಗಿರುವದು ಅತ್ಯವಶ್ಯವಾಗಿದೆ ಎಂದರು.
ರೋಟರಿ ಸೆಂಟ್ರಲ್ ಮಾಜಿ ಅಧ್ಯಕ್ಷ ವ್ಹಿ.ಕೆ. ಗುರುಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಈಗಲೇ ನಾವು ನೀರನ್ನು ಉಳಿಸಿಕೊಳ್ಳದಿದ್ದರೆ ಬರಲಿರುವ ದಿನಮಾನದಲ್ಲಿ ನೀರಿನ ಕೊರತೆಯಿಂದ ಜೀವ ಸಂಕುಲ ತತ್ತರಿಸಿ ಹೋಗಲಿದೆ ಎಂದರು.
ಮಿಡ್ಟೌನ್ನ ಖಜಾಂಚಿ ರಾಣಿ ಚಂದಾವರಿ ಮಾತನಾಡಿ, ಅತಿಯಾದ ಪರಿಸರ ಮಾಲಿನ್ಯ ಹಾಗೂ ಜಲಸಂಪನ್ಮೂಲದ ಅನಗತ್ಯವಾಗಿ ವ್ಯರ್ಥ ಮಾಡುತ್ತಿರುವುದರಿಂದ ನೀರಿನ ಕೊರತೆ ಉಂಟಾಗುತ್ತದೆ ಎಂದರು.
ಗದಗ ಸೆಂಟ್ರಲ್ ರೋಟರಿ ಕಾರ್ಯದರ್ಶಿ ಸಂತೋಷ ತೋಟಗಂಟಿಮಠ ಸ್ವಾಗತಿಸಿದರು. ಸಿ.ಜಿ. ಹಿರೇಗೌಡರ ವಂದಿಸಿದರು. ಮಂಜುನಾಥ ಬೇಲೇರಿ, ಸುರೇಶ ಅಬ್ಬಿಗೇರಿ, ಸ್ನೇಹಾ ಹಿರೇಮಠ, ಗೌತಮ್ ಗಡ್ಡಿ, ಅನಿತಾ ತೋಟಗಂಟಿಮಠ, ನೇತ್ರಾ ಗಡ್ಡಿ ಮುಂತಾದವರಿದ್ದರು.