ವಿಜಯಸಾಕ್ಷಿ ಸುದ್ದಿ, ಗದಗ: ಅಕ್ಷರದ ಮಾತೆ, ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಚರಿತ್ರೆಯಲ್ಲಿ ಬರುವುದಕ್ಕಿಂತ ಪೂರ್ವ ಒಂದು ಕಾಲಘಟ್ಟದಲ್ಲಿ ದೇಶದ ಮಹಿಳೆಯನ್ನು ವಂಚಿಸಿ ಶಿಕ್ಷಣದಿಂದ ದೂರವಿರಿಸಿ ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದುದರ ವಿರುದ್ಧ ಧ್ವನಿಯೆತ್ತಿ ಅವರಿಗೂ ಕೂಡಾ ಶಿಕ್ಷಣದ ಜೊತೆಗೆ ಸಮಾಜದಲ್ಲಿ ಸಮಾನತೆ ಸಿಗುವಂತೆ ಪ್ರಯತ್ನಿಸಿ, ಹೆಣ್ಣುಮಕ್ಕಳ ಪಾಲಿಗೆ ನಿಜಶಾರದೆಯಾಗಿದ್ದಾರೆ ಎಂದು ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿಮನಿ ಅಭಿಪ್ರಾಯಪಟ್ಟರು.
ಅವರು ವೃತ್ತಿಪರ ಮಹಿಳಾ ವಸತಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಗದಗ, ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ ಗದಗ ಹಾಗೂ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ ಅಧ್ಯಯನ ಕೇಂದ್ರ ಗದಗ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಅಕ್ಷರದ ಮಾತೆ ಸಾವಿತ್ರಿಬಾಯಿ ಫುಲೆಯವರ 195ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ರಾಜ್ಯ ದ.ಸಂ.ಸ ಸಂಘಟನಾ ಸಂಚಾಲಕರು ಹಾಗೂ ನಿವೃತ್ತ ಶಿಕ್ಷಕರಾದ ಎಸ್.ಎನ್. ಬಳ್ಳಾರಿ ಮಾತನಾಡಿ, ಸಾವಿತ್ರಿಬಾಯಿ ಫುಲೆಯವರ ಜೀವನ ಪ್ರತಿಯೊಬ್ಬ ಸ್ವಾಭಿಮಾನಿ ಮಹಿಳೆಗೆ ಸ್ಪೂರ್ತಿಯಾಗಿದ್ದು, ಅವರ ಸಾಮಾಜಿಕ ಕಳಕಳಿ ಮಹಿಳೆಯರ ಏಳಿಗೆಗಾಗಿ ಶ್ರಮಿಸಿದ ಪರಿ ಕಷ್ಟಕರವಾಗಿದ್ದರೂ ಕೂಡಾ ಎದುರಿಸಿ ಸಾಧನೆ ಮಾಡಿರುವುದು ಅದ್ಭುತವಾದುದಾಗಿದೆ. ಪ್ರತಿಯೊಬ್ಬರೂ ಅವರ ಆದರ್ಶ ಪಾಲಿಸಬೇಕೆಂದು ಕರೆ ನೀಡಿದರು.
ದಲಿತ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಚಂದ್ರು ಮೇಲಿನಮನಿ, ಕಾರ್ಯದರ್ಶಿಗಳಾದ ಮುತ್ತು ಮಾದರ, ತಾಲೂಕಾ ಸಂಚಾಲಕರಾದ ವಿನಾಯಕ ಬಳ್ಳಾರಿ, ದಲಿತ ನಾಯಕರಾದ ಮಂಜುನಾಥ ಮುಳಗುಂದ ಹಾಗೂ ವಿದ್ಯಾರ್ಥಿ ನಾಯಕರಾದ ವಿಶಾಲ ಗೋಶಲ್ಲನವರ ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ದಲಿತ ಕಲಾಮಂಡಳಿ ಸಂಚಾಲಕ ನಾಗರಾಜ ಗುತ್ತಿ ಕ್ರಾಂತಿಗೀತೆ ಹಾಡಿದರು. ಜಿಲ್ಲಾ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಕೃಷ್ಣಾ ಪೂಜಾರ ಸ್ವಾಗತಿಸಿದರೆ, ಹರೀಶ ಭಾವಿಮನಿ ವಂದಿಸಿದರು. ವೇದಿಕೆಯ ಮೇಲೆ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಗೋಪಾಲ ಪವಾರ, ನಿಲಯ ಪಾಲಕರಾದ ಸುಜಾತಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ನಂದಾ ಹಣಬರಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಉನ್ನತವಾದ ಗುರಿ ಹೊಂದಿ ಸಾಧನೆಗೈದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದ ಅವರು, ಸಾಧಿಸುವ ಛಲ ಬೆಳೆಸಿಕೊಳ್ಳಲು ಕರೆ ನೀಡಿದರು.



