
ವಿಜಯಸಾಕ್ಷಿ ಸುದ್ದಿ, ಗದಗ: ಶಾಲೆಗಳು ಮಕ್ಕಳಿಗೆ ಸಮಾನತೆ, ಗುಣಾತ್ಮಕತೆ ಹಾಗೂ ಶಿಸ್ತನ್ನು ಒಡಮೂಡಿಸುತ್ತವೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪರಸ್ಪರ ಶ್ರದ್ಧೆ ಹಾಗೂ ಕಾಳಜಿ ಮುಖ್ಯ. ಮಕ್ಕಳು ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಚಿಂತಕಿ ಸುಶೀಲಾ ಕೋಟಿ ಹೇಳಿದರು.
ಅವರು ಇತ್ತೀಚೆಗೆ ಗದುಗಿನ ಸರ್ಕಾರಿ ಶಾಲೆ ನಂ.3ರಲ್ಲಿ ಗದಗ ಜಿಲ್ಲಾ ಶರಣೆ ಅಕ್ಕಮಹಾದೇವಿ ಕದಳಿಶ್ರೀ ಮಹಿಳಾ ವೇದಿಕೆಯಿಂದ ಜರುಗಿದ ಅಮೃತ ಭೋಜನ ಜ್ಞಾನಸಿಂಚನ ಮಾಲಿಕೆ-5ರ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಮಕ್ಕಳಿಗೆ ಸಿಹಿ ಭೋಜನ ವಿತರಿಸಿ ಮಾತನಾಡಿದ ಚಿಂತಕಿ ಜಯಶ್ರೀ ಹಿರೇಮಠ, ವಿದ್ಯಾರ್ಥಿಗಳು ಶಿಸ್ತು ಪಾಲಿಸಬೇಕು. ಓದುವ ಹವ್ಯಾಸ ರೂಢಿಸಿಕೊಂಡು ಬದುಕಿನಲ್ಲಿ ಶೈಕ್ಷಣಿಕ ಮುನ್ನಡೆ ಸಾಧಿಸಬೇಕು. ಕಳೆದ ದಿನಗಳು ಮತ್ತೆ ಬರುವುದಿಲ್ಲ. ಮಕ್ಕಳು ಪ್ರತಿಯೊಂದು ಕ್ಷಣಗಳನ್ನು ಮೌಲ್ಯಯುತವಾಗಿ ಉಪಯೋಗಿಸಿಕೊಂಡು ವಿದ್ಯಾರ್ಥಿ ಜೀವನವನ್ನು ಪರಿಪೂರ್ಣಗೊಳಿಸಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯೆ ಪಿ.ಎಸ್. ಮಣ್ಣೂರ ಮಾತನಾಡಿ, ಸಮುದಾಯ ಸರ್ಕಾರಿ ಶಾಲೆಗಳಿಗೆ ಆಗಮಿಸಿ ಪ್ರೋತ್ಸಾಹ ನೀಡುವುದರೊಂದಿಗೆ ಮಕ್ಕಳಿಗೆ ಸಿಹಿ ಭೋಜನ ಹಾಗೂ ಕಲಿಕಾ ಸಾಮಗ್ರಿ ವಿತರಿಸಿ ಅವರೊಂದಿಗೆ ಕೆಲವು ಕ್ಷಣಗಳನ್ನು ಕಳೆದು ಮಕ್ಕಳಲ್ಲಿ ಉತ್ಸಾಹ ತುಂಬಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು.
ತನ್ವಿ ಹರ್ಲಾಪೂರಮಠ, ದೀಪಾ ಮೇಟಿ ಅವರಿಂದ ವಚನ ಪ್ರಾರ್ಥನೆ ಜರುಗಿತು. ಜಿ.ಕೆ. ಕಾಳೆ ಸ್ವಾಗತಿಸಿದರು. ಎಸ್.ಬಿ. ಬಾಗೂರ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಗಿರಿಜವ್ವ ಪಲ್ಲೇದ, ಲಕ್ಷ್ಮೀ ಹಿರೇಮಠ, ಜೇರಾಬಿ ಭಾವಿಕಟ್ಟಿ, ವಿಜಯ ಲಕ್ಷ್ಮೀ ಹಳ್ಳಿಕೇರಿ, ಜಯಮ್ಮ ಮೆಣಸಗಿ, ಮಂಜುಳಾ ಅನಂತಪುರ, ತೆಲಗಾವಿ, ಗೀತಾ ಪಲ್ಲೇದ, ಅಶ್ವಿನಿ ಹೆರಕಲ್, ನಿಂಗಮ್ಮ ಕೊಚಲಾಪೂರ ಮುಂತಾದವರು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕವಿತಾ ದಂಡಿನ, ಶ್ರಾವಣದಲ್ಲಿ ನಡೆಯುವ ಅಮೃತ ಭೋಜನ-ಜ್ಞಾನಸಿಂಚನ ಕಾರ್ಯಕ್ರಮ ಕಳೆದ 16 ವರ್ಷಗಳಿಂದ ನಿರಂತರವಾಗಿ ನಡೆದು ಬರುತ್ತಿದ್ದು, ಸರ್ಕಾರಿ ಶಾಲೆಗಳಿಗೆ ಸಮುದಾಯವು ಬಂದು ವಿದ್ಯಾರ್ಥಿಗಳಿಗೆ ಸಿಹಿ ಭೋಜನ ಜೊತೆಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಿದೆ. ಕೋಟಿ ಕುಟುಂಬದ ತೋಂಟೇಶ, ಕೀರ್ತಿ, ಪ್ರಥಮ, ಸುಶೀಲಾ ಹಾಗೂ ಜಯಶ್ರೀ ಹಿರೇಮಠ ಇಂದಿನ ಕಾರ್ಯಕ್ರಮದ ಪ್ರಾಯೋಜಕರಾಗಿದ್ದಾರೆ ಎಂದರು.