ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಪ್ರಮುಖ ಹಂತವಾದ ದ್ವಿತೀಯ ಪಿ.ಯು ಅವಧಿಯಲ್ಲಿ ಕೇವಲ ವಿದ್ಯಾರ್ಥಿ ಹಾಗೂ ಶಿಕ್ಷಕರ ಪಾತ್ರ ಮಾತ್ರವಲ್ಲದೇ ಅಷ್ಟೇ ಪ್ರಮಾಣದ ಜವಾಬ್ದಾರಿ ಪಾಲಕರದ್ದೂ ಆಗಿರುತ್ತದೆ ಎಂದು ಸ್ಟುಡೆಂಟ್ಸ್ ಎಜ್ಯುಕೇಶನ್ ಸಂಸ್ಥೆಯ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ ಅಭಿಪ್ರಾಯಪಟ್ಟರು.
ನಗರದ ಸನ್ಮಾರ್ಗ ಪದವಿಪೂರ್ವ ಮಹಾವಿದ್ಯಾಲಯದ ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಂಸ್ಥೆಯ ನಿರ್ದೇಶಕರಾದ ಪ್ರೊ. ರೋಹಿತ್ ಒಡೆಯರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕೇವಲ ವಿಷಯಗಳನ್ನು ಬೋಧಿಸುವುದರ ಜೊತೆಗೆ ಉತ್ತೇಜನಕಾರಿಯಾದ, ನೈತಿಕತೆ ಪ್ರಧಾನವಾಗಿರುವ ಹಲವಾರು ವಿಷಯಗಳನ್ನು ಸಾಂದರ್ಭಿಕವಾಗಿ ಬೋಧಿಸುವ ಪರಿಪಾಠವನ್ನು ನಮ್ಮ ಸಂಸ್ಥೆ ರೂಪಿಸಿಕೊಂಡಿದೆ ಎಂದರು.
ಪ್ರಾ. ಪ್ರೇಮಾನಂದ ರೋಣದ ಮಾತನಾಡಿ, ವಿದ್ಯಾರ್ಥಿಯ ಸಂಪೂರ್ಣ ವ್ಯಕ್ತಿತ್ವ ವಿಕಸನವಾಗುವಂತೆ ನಮ್ಮ ಕಾಲೇಜು ನಿರಂತರ ಪ್ರಯತ್ನ ಮಾಡುತ್ತಿದೆ. ಇಂತಹ ಕಾರ್ಯದಲ್ಲಿ ಪಾಲಕರ ಸಂಪೂರ್ಣ ಸಹಕಾರವಿದ್ದರೆ ಮಾತ್ರ ವಿದ್ಯಾರ್ಥಿಯು ಯಶಸ್ಸಿನ ಶಿಖರ ತಲುಪಬಲ್ಲ ಎಂದು ಹೇಳಿದರು.
ವೇದಿಕೆಯ ಮೇಲೆ ಸಂಸ್ಥೆಯ ನಿರ್ದೇಶಕರಾದ ಪ್ರೊ. ಸಯ್ಯದ್ ಮತೀನ್ ಮುಲ್ಲಾ, ಪ್ರೊ. ಪುನೀತ ದೇಶಪಾಂಡೆ, ಪ್ರೊ. ರಾಹುಲ್ ಒಡೆಯರ್, ಆಡಳಿತಾಧಿಕಾರಿ ಎಮ್.ಸಿ. ಹಿರೇಮಠ ಉಪಸ್ಥಿತರಿದ್ದರು. ಪಾಲಕರ ಪರವಾಗಿ ವಿಜಯಲಕ್ಷ್ಮೀ ಪಾಟೀಲ ಮಾತನಾಡಿದರು.
ಪ್ರೊ. ಹೇಮಂತ ದಳವಾಯಿ ಸ್ವಾಗತಿಸಿದರೆ, ಮುರಲೀಧರ ಸಂಕನೂರ ನಿರೂಪಿಸಿದರು. ಪ್ರೊ. ವಿಜಯ ಹೆಬಸೂರ ವಂದಿಸಿದರು.