ಕೆ.ಎಚ್. ಪಾಟೀಲರ ಪ್ರತಿಮೆ ನೋಡಿದರೆ ಅವರ ಹುಟ್ಟು ಹೋರಾಟಗಾರಿಕೆ ನೆನಪಿಗೆ ಬರುತ್ತೆ: ಜಿ. ಪರಮೇಶ್ವರ್!

0
Spread the love

ಕೊಪ್ಪಳ:- ಜಿಲ್ಲೆಯ ಕುಕನೂರು ತಾಲ್ಲೂಕಿನ ಶಿರೂರ ಪುನರ್ವಸತಿ ಗ್ರಾಮದಲ್ಲಿ ಮಾಜಿ ಸಚಿವ ದಿ. ಕೆ.ಎಚ್. ಪಾಟೀಲ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮ ಇಂದು ಜರುಗಿದೆ. ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಗೃಹ ಸಚಿವ ಜಿ. ಪರಮೇಶ್ವರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿ. ಪರಮೇಶ್ವರ್, ಕೆ.ಎಚ್. ಪಾಟೀಲ್ ಅವರು ತಮ್ಮ ಗೌಡಿಕೆಯನ್ನು ಮೀರಿ ಜನ ಸಮುದಾಯದ ಜೊತೆಗೆ ಗುರುತಿಸಿಕೊಳ್ಳುವುದರ ಜೊತೆಗೆ ಅವರು ಜನರ ಕಷ್ಟಗಳಿಗೆ ಸ್ಪಂದಿಸುವ ಹುಟ್ಟು ಹೋರಾಟಗಾರರಾಗಿದ್ದರು.

Advertisement

ರಾಜಕಾರಣದಲ್ಲಿ ಬಹಳ ವರ್ಷಗಳ ಕಾಲ ಜನ ಸಮುದಾಯದಲ್ಲಿ ಉಳಿದ ಕೆ.ಎಚ್. ಪಾಟೀಲ್ ಅವರ ಮೂರ್ತಿಯನ್ನು ಇಂದು ಸಂತೋಷದಿಂದ ಅನಾವರಣಗೊಳಿಸಿದ್ದೇನೆ. ನಾನು ಮೊದಲ ಬಾರಿ ಶಾಸಕನಾಗಿದ್ದಾಗ ಕೆ.ಎಚ್. ಪಾಟೀಲ್ ಅವರು ಕಂದಾಯ ಸಚಿವರಾಗಿದ್ದರು. ಯುವ ಉತ್ಸಾಹದ ಹೊಸ ಶಾಸಕರನ್ನು ಅವರು ಪ್ರೀತಿಯಿಂದ ಮಾತನಾಡಿಸುವುದರ ಜೊತೆಗೆ ನಮಗೆ ಪ್ರೋತ್ಸಾಹಿಸುತ್ತಿದ್ದರು. ಜನರ ಕಷ್ಟಗಳನ್ನು ದೂರ ಮಾಡುವ ಸಲುವಾಗಿ ಅವರು ಸಹಕಾರಿ ಕ್ಷೇತ್ರ. ಸಾಮಾಜಿಕ. ಆರ್ಥಿಕ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದರು ಎಂದರು. ಮೂರ್ತಿಗಳು ನೋಡಿದಾಗ ಸ್ಪೂರ್ತಿಯಾಗುತ್ತದೆ. ಇಂದಿರಾಗಾಂಧಿ ಅವರ ಮೂರ್ತಿ ನೋಡಿದರೆ ಅವರು ಬಡವರಿಗಾಗಿ ಹಲವಾರು ಯೋಜನೆ ಜಾರಿಗೆ ತಂದರು ಎಂದು ನೆನೆಸುತ್ತವೆ. ಡಿ.ದೇವರಾಜ ಅರಸು ಅವರ ಮೂರ್ತಿ ನೋಡಿದರೆ ಅವರು ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕೆಲಸ ಮಾಡಿದರು ಎಂಬುದು ಹೇಗೆ ನೆನಪಿಗೆ ಬರುತ್ತದೆಯೋ ಹಾಗೆ ಕೆ.ಎಚ್. ಪಾಟೀಲ್ ಅವರ ಪ್ರತಿಮೆ ನೋಡಿದರೆ ಅವರ ಶಿಸ್ತಿನ ಸಿಪಾಯಿ ಹಾಗೂ ಹುಟ್ಟು ಹೋರಾಟಗಾರಿಕೆ ನೆನಪಿಗೆ ಬರುತ್ತದೆ ಎಂದು ಹೇಳಿದರು.

ಬಳಿಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರು ಮಾತನಾಡಿ, ನಾನು ಮತ್ತು ಭೋಸರಾಜು ಅವರು ಕೆ.ಎಚ್ ಪಾಟೀಲ್ ಅವರ ಜೊತೆಗೆ ಕೆಲಸ ಮಾಡಿದ್ದೇವೆ. ಅವರು ಒಳ್ಳೆಯ ಆಡಳಿತಗಾರರಾಗಿದ್ದರು. ಅವರು ಪಾರದರ್ಶಕ ಆಡಳಿತಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಅವರು ಮಾಡಿದ್ದಾರೆ. ತಮ್ಮ ಸರಳ ವ್ಯಕ್ತಿತ್ವದ ಜೊತೆಗೆ ಆಡಳಿತದಲ್ಲಿ ಹಿಡಿತ ಉಳ್ಳವರಾಗಿದ್ದರು. ಕೃಷಿ. ಸಹಕಾರ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದರು. ಕೆ.ಎಚ್. ಪಾಟೀಲ್ ಅವರನ್ನು ಹುಲಕೋಟಿಯ ಹುಲಿ ಎಂದೇ ಕರೆಯುತ್ತಿದ್ದರು ಎಂದರು.

ಬಳಿಕ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿ, ಶಿರೂರ ಗ್ರಾಮದಲ್ಲಿ ಕೆ.ಹೆಚ್.ಪಾಟೀಲ್ ಅವರ ಮೂರ್ತಿಯನ್ನು ಸುಂದರವಾಗಿ ಪ್ರತಿಷ್ಠಾಪನೆ ಮಾಡಿರುವುದು ನನಗೆ ಸಂತಸ ತಂದಿದೆ. ಹತ್ತಿ ಮಾರುವುದಕ್ಕಾಗಿ ರೈತರಿಗೆ ಬಹು ದೊಡ್ಡ ಸವಾಲಾಗಿದ್ದ ಸಂದರ್ಭದಲ್ಲಿ ಕೆ.ಹೆಚ್.ಪಾಟೀಲ್ ರವರು ಸಹಕಾರಿ ಕ್ಷೇತ್ರದ ಮುಖಾಂತರ ಹತ್ತಿ ಮಿಲ್‌ಗಳನ್ನು ಪ್ರಾರಂಭ ಮಾಡಿ ರೈತರಿಗೆ ರಕ್ಷಣೆ ಮಾಡಿದರು. ಸಾಮಾಜಿಕ ನ್ಯಾಯವನ್ನು ಒದಗಿಸಲು ಸಹಕಾರ ಕ್ಷೇತ್ರದ ಮೂಲಕ ಹೋರಾಟ ಮಾಡಿರುವ ಅವರನ್ನು ನೆನಪಿಸುವಂತಹ ಕಾರ್ಯವನ್ನು ಶಿರೂರು ಗ್ರಾಮದಲ್ಲಾಗಿದೆ. ನಮ್ಮ ತಂದೆ ಕೆ.ಹೆಚ್.ಪಾಟೀಲ್ ಅವರ ಬಗ್ಗೆ ಎಲ್ಲರೂ ತಮ್ಮ ಸಂಪರ್ಕ ಅನುಭವವನ್ನು ಹಂಚಿಕೊಂಡಿದ್ದಾರೆ ಎಂದರು.

ಸಚಿವ ಎನ್.ಎಸ್.ಭೋಸರಾಜು ಮಾತನಾಡಿ, ಕೆ.ಎಚ್ ಪಾಟೀಲ್ ಅವರು ಸಂಘಟನೆ ಹಾಗೂ ಆಡಳಿತದ ಬಗ್ಗೆ ತಿಳಿಸಲು ನಮಗೆ ಮಾರ್ಗದರ್ಶಕರಾಗಿದ್ದರು, ಯಾವುದೇ ಸಂಘಟನೆ ವಿಷಯದಲ್ಲಿ ಚರ್ಚೆ ಬಂದಾಗ ನೇರವಾಗಿ ನಮಗೆಲ್ಲ ನಿರ್ದೇಶನ ಮಾಡುತ್ತಿದ್ದರು, ರಾಜ್ಯದ ಸಚಿವರಾಗಿದ್ದಾಗ ಅಧಿಕಾರಿಗಳಿಗೂ ಸಹ ನಿರ್ದೇಶನ ಮಾಡಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಅವರು ಮಾಡಿದ್ದಾರೆ. ನಮ್ಮ ಉತ್ತರ ಕರ್ನಾಟಕಕ್ಕೆ ಯಾವುದೇ ರೀತಿಯ ಅನ್ಯಾಯ ಅಗುವ ಸಂದರ್ಭದಲ್ಲಿ ಅದು ರಾಜಕೀಯದಲ್ಲಿ ಇರಬಹುದು ಅಥವಾ ಆಡಳಿತದಲ್ಲಿ ಇರಬಹುದು, ಅದನ್ನು ನೇರವಾಗಿ ಪ್ರತಿಭಟಿಸಿ, ಹೇಳುವ ನಾಯಕರು ಆ ಕಾಲದಲ್ಲಿ ಅವರೊಬ್ಬರೇ ಇದ್ದದ್ದು. ರಾಜ್ಯದ ಹಿತದೃಷ್ಟಿಯ ಜೊತೆಗೆ ಈ ಭಾಗದ ಹಿತದೃಷ್ಟಿಯನ್ನು ಸಹ ಅವರು ಕಡೆಗಣಿರಸಿಲ್ಲ, ಈ ಭಾಗದ ಅಭಿವೃದ್ಧಿಗೂ ಸಹ ಬಹಳ ಶ್ರಮಿಸಿದರು. ನನ್ನನ್ನು ಗುರುತಿಸಿ ರಾಜಕೀಯದಲ್ಲಿ ಪ್ರೋತ್ಸಾಹ ನೀಡಿದವರು ಯಾರಾದರು ಇದ್ದರೆ ಅದು ಕೆ.ಹೆಚ್.ಪಾಟೇಲ್ ಅವರು, ನಾನು ಇವತ್ತು ಅವರನ್ನು ಸ್ಮರಿಸುತ್ತೇನೆ ಎಂದು ಹೇಳಿದರು.

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಮಾತನಾಡಿ, ಕೆ.ಎಚ್. ಪಾಟೀಲ್ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಅವರು ರೈತಪರ ಕಳಕಳಿ ಉಳ್ಳವರಾಗಿದ್ದರು. ಉತ್ತರ ಕರ್ನಾಟಕದಲ್ಲಿ ಇಂತಹ ಸರಳ ಸಜ್ಜನಿಕೆಯ ರಾಜಕಾರಣಿಗಳ ಸಂಖ್ಯೆ ಕಡಿಮೆ ಇದೆ. ಮುಖ್ಯಮಂತ್ರಿ ಸಿದ್ರಾಮಯ್ಯನವರಿಗೆ ಬಡವರ ಬಗ್ಗೆ ಬಹಳ ಕಾಳಜಿ ಇರುವುದರಿಂದ ಅವರು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬರುವ ಮುಂದಿನ ಮೂರು ವರ್ಷ ನಮ್ಮ ಸರ್ಕಾರ ಪ್ರಾಮಾಣಿಕ ಸೇವೆ ಜನರಿಗೆ ನೀಡಲಿದೆ. ದಿ. ಕೆ.ಎಚ್. ಪಾಟೀಲ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ ತಮಗೆಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.

ಇದೇ ವೇಳೆ 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಕುಕನೂರು ಮತ್ತು ಯಲಬುರ್ಗಾ ತಾಲ್ಲೂಕಿನ ವಿವಿಧ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟ್ಯಾಬ್ ವಿತರಣೆ ಮಾಡಲಾಗಿದೆ. ಬಳಿಕ ಪುತ್ಥಳಿ ನಿರ್ಮಾಣ ಮಾಡಿದ ಸಿದ್ಧಾರ್ಥ್ ಪಾಟೀಲ್ ದಂಪತಿಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಸಾಕಷ್ಟು ಮುಖಂಡರು ಭಾಗಿಯಾಗಿದ್ದರು.


Spread the love

LEAVE A REPLY

Please enter your comment!
Please enter your name here