ವಿಜಯಸಾಕ್ಷಿ ಸುದ್ದಿ, ಗದಗ : ಆಲ್ ಇಂಡಿಯಾ ಕ್ರಿಕೆಟ್ ಅಸೋಸಿಯೇಷನ್ ಫಾರ್ ಫಿಸಿಕಲಿ ಚಾಲೆಂಜ್ಡ್ ವತಿಯಿಂದ ಜುಲೈ 23ರಿಂದ 30ರವರೆಗೆ ಹರಿಯಾಣದ ಸೋನಿಪತ್ನಲ್ಲಿ ನಡೆಯುವ ದಿವ್ಯಾಂಗ ಪ್ರಿಮಿಯರ್ ಲೀಗ್ ಸೀಸನ್-3 ಪಂದ್ಯಾವಳಿಗೆ ಗದುಗಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿ ಸತೀಶಕುಮಾರ ಭಾಸ್ಕರ್ ಮಾಳೋದೆ ದೆಹಲಿ ಡೈನಮಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಐಪಿಎಲ್ ಮಾದರಿಯ ಈ ಪಂದ್ಯಾವಳಿಯಲ್ಲಿ ದೆಹಲಿ ಡೈನಮಸ್ ತಂಡಕ್ಕೆ ಗದಗ ಜಿಲ್ಲೆಯಿಂದ ಸತೀಶಕುಮಾರ ಆಯ್ಕೆಯಾಗಿದ್ದು, ರಾಜ್ಯದಿಂದ ಆಯ್ಕೆಯಾದ 9 ಕ್ರೀಡಾಪಟುಗಳಲ್ಲಿ ಸತೀಶ ಅವರು ಸ್ಥಾನ ಪಡೆದುಕೊಂಡಿದ್ದಾರೆ.
ಜುಲೈ 27ರಿಂದ 30ರವರೆಗೆ ಹರಿಯಾಣ ಸೋನಿಪತ್ನಲ್ಲಿ ಹೊನಲು ಬೆಳಕಿನ ಪಂದ್ಯಗಳು ನಡೆಯಲಿವೆ. ಈ ಪಂದ್ಯಾವಳಿಯಲ್ಲಿ ದೆಹಲಿ ಡೈನಮಸ್ ತಂಡದ ಪರವಾಗಿ ಕುಮಾರ ಸತೀಶಕುಮಾರ ಮೈದಾನಕ್ಕಿಳಿಯಲಿದ್ದಾರೆ. ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಸಚಿವ ಎಚ್ ಕೆ. ಪಾಟೀಲ್, ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು, ಕಾಲೇಜಿನ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸತೀಶಕುಮಾರ ಮಾಳೋದೆ ಅವರಿಗೆ ಶುಭ ಹಾರೈಸಿದ್ದಾರೆ.