ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ಮಾನವನ ಬದುಕು ಒತ್ತಡಗಳಿಂದ ಬಳಲಿಹೋಗಿದೆ. ಯಂತ್ರದಂತೆ ದುಡಿದರೂ, ಸಂಪತ್ತು ಗಳಿಸಿದರೂ ಶಾಂತಿ ಕಾಣುತ್ತಿಲ್ಲ. ಬಾಳಿನ ವಿಕಾಸಕ್ಕೆ ಆಧ್ಯಾತ್ಮದ ಅರಿವು ಬೇಕು. ಆತ್ಮ ಸಂಯಮ ಆಧ್ಯಾತ್ಮ ಜೀವನದ ಅಡಿಪಾಯವಾಗಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ವೀರಗಾಸೆ-ಪುರವಂತರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ವಿಜ್ಞಾನ-ತಂತ್ರಜ್ಞಾನದಿಂದ ಮನುಷ್ಯನ ಪ್ರಗತಿ ಅದ್ಭುತವಾಗಿದೆ. ಭೌತಿಕ ಸಿರಿ ಸಂಪತ್ತು, ಅಧಿಕಾರ ನೆಮ್ಮದಿ ತರಲಾರದು. ಸತ್ಯ ಧರ್ಮದ ವಿಷಯದಲ್ಲಿ ಒಂದಿಷ್ಟಾದರೂ ಆಧ್ಯಾತ್ಮ ಜ್ಞಾನದ ಅರಿವು ಇರಬೇಕಾದುದು ಅವಶ್ಯಕ. ಇಂದಿನ ವಿಜ್ಞಾನ ಯುಗದಲ್ಲಿಯೂ ಸಹ ಶ್ರೀ ವೀರಭದ್ರಸ್ವಾಮಿಯ ಲೀಲೆ-ಪವಾಡಗಳು ಅದ್ಭುತವಾಗಿವೆ. ದುಷ್ಟ ಶಕ್ತಿಗಳ ನಿರ್ಮೂಲನೆಗೆ ಮತ್ತು ಶಿವಶಕ್ತಿ ಸಂವರ್ಧನೆ ಶ್ರೀ ವೀರಭದ್ರಸ್ವಾಮಿಯ ಅವತಾರವಾಗಿದೆ. ಜಗದ ಕತ್ತಲೆ ಕಳೆದು ಜ್ಞಾನದ ಬೆಳಗು ಬೀರಲು ಗುರು ಬಹಳಷ್ಟು ಮುಖ್ಯ. ವೀರಶೈವ ಸಂಸ್ಕೃತಿಯ ಬೆಳವಣಿಗೆಗೆ ವೀರಗಾಸೆ ಮತ್ತು ಪುರವಂತರ ಕೊಡುಗೆ ಅಪೂರ್ವವಾದುದು. ಪ್ರಾಚೀನ ಸಂಸ್ಕೃತಿಯ ಅರಿವು ಮೂಡಿಸುವುದೇ ಈ ಸಮಾರಂಭದ ಮೂಲ ಉದ್ದೇಶವೆಂದರು.
ವಾಣಿಜ್ಯ ತೆರಿಗೆ ಅಧಿಕಾರಿ ಭುವನೇಶ್ವರಿ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. `ರಂಭಾಪುರಿ ಬೆಳಗು’ ಮಾಸ ಪತ್ರಿಕೆಯನ್ನು ಬೆಂಗಳೂರು ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆಯ ಅಧ್ಯಕ್ಷ ಯು.ಎಂ. ಬಸವರಾಜ್ ಬಿಡುಗಡೆಗೊಳಿಸಿ, ಧರ್ಮ ಧ್ವಜಾರೋಹಣ ನೆರವೇರಿಸಿದ ಚಿಕ್ಕಮಗಳೂರು ಶಾಸಕ ಹೆಚ್.ಡಿ. ತವ್ಮ್ಮಯ್ಯ ಮಾತನಾಡಿದರು.
ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ ಸಮಾರಂಭದಲ್ಲಿ ಕವಲೇದುರ್ಗ ಭುವನಗಿರಿ ಸಂಸ್ಥಾನ ಮಠದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ನುಡಿ ನಮನ ಸಲ್ಲಿಸಿದರು. ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶ್ರೀಗಳು, ಕಡೇನಂದಿಹಳ್ಳಿ ರೇವಣಸಿದ್ದೇಶ್ವರ ಶ್ರೀಗಳು, ಕಾರ್ಜುವಳ್ಳಿ ಸದಾಶಿವ ಶ್ರೀಗಳು ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ತೆಂಡೆಕೆರೆ, ಧನಗೂರು, ಸಂಗೊಳ್ಳಿ, ಬೇರುಗಂಡಿ, ದೋರನಹಳ್ಳಿ, ಅಚಲೇರಿ, ದೊಡ್ಡಸಗರ, ಸಿದ್ಧರಬೆಟ್ಟ, ನಂದಿತಾವರೆ ಶ್ರೀಗಳು ಉಪಸ್ಥಿತರಿದ್ದರು.
ಕುಮಾರಿ ನೇಹಾ-ಲಿಖಿತಾ ಮತ್ತು ಧನ್ಯ ಇವರಿಂದ ಭರತನಾಟ್ಯ ಜರುಗಿತು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಚಿಕ್ಕಮಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಿಳಾ ಮಂಡಳದ ಸದಸ್ಯರಿಂದ ಪ್ರಾರ್ಥನಾಗೀತೆ ಜರುಗಿತು. ಚಿಕ್ಕಮಗಳೂರು ತಾಲೂಕಾ ವೀರಶೈವ ಸಮಾಜದ ಅಧ್ಯಕ್ಷ ಬಿ.ಎ. ಶಿವಶಂಕರ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ವೀರೇಶ ಕುಲಕರ್ಣಿ ನಿರೂಪಿಸಿದರು.
ಸಮಾರಂಭವನ್ನು ಉದ್ಘಾಟಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಶಿವ ಧರ್ಮದ ತಂಗಾಳಿ ಜೀವನ ಉನ್ನತಿಗೆ ಸಹಕಾರಿ. ನಿರ್ಭಯದಿಂದ ಬಾಳುವುದೇ ನಿಜವಾದ ಬದುಕು. ಬದುಕು ಕಲಿಸುವ ಪಾಠಗಳು ವಿಚಿತ್ರ. ಸಹನೆ-ತಾಳ್ಮೆ ಜೊತೆಗಿಲ್ಲದಿದ್ದರೆ ಉನ್ನತಿ ಸಾಧ್ಯವಿಲ್ಲ. ವೀರಶೈವ ಧರ್ಮದಲ್ಲಿ ವೀರಗಾಸೆ ಮತ್ತು ಪುರವಂತರಿಗೆ ವಿಶೇಷ ಗೌರವವಿದೆ. ವೀರಭದ್ರನ ಪರಾಕ್ರಮ ಧರ್ಮ ಸಂರಕ್ಷಣೆಗೆ ಮೂಲವಾಗಿದೆ ಎಂದರು.