ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶಿಕ್ಷಣಕ್ಕಾಗಿ ಸರಕಾರ ಬಹಳಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಮತ್ತು ದಾಖಲಾತಿಯನ್ನು ಹೆಚ್ಚಿಸುವುದಕ್ಕಾಗಿ ಅನೇಕ ಯೋಜನೆಗಳಿವೆ. ಇವುಗಳನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಮಕ್ಕಳು ನಿಯಮಿತವಾಗಿ ಶಾಲೆಗೆ ಬರುವಂತೆ ನೋಡಿಕೊಳ್ಳಿ ಎಂದು ಮುಖ್ಯ ಶಿಕ್ಷಕ ಸಂಗಯ್ಯ ಪ್ರಭುಸ್ವಾಮಿಮಠ ಹೇಳಿದರು.
ಪಟ್ಟಣದ ಕೋಡಿಕೊಪ್ಪದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವ ಹಾಗೂ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಮ್ಮ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ ಹೀಗೆ ಅನೇಕ ಯೋಜನೆಗಳನ್ನು ಸರಕಾರ ಜಾರಿಗೊಳಿಸಿದೆ. ಶಾಲಾ ಅವಧಿಯಲ್ಲಿ ನಮ್ಮ ಶಿಕ್ಷಕ ಬಳಗ ಅವರನ್ನು ಅತ್ಯಂತ ಸಮರ್ಪಕವಾಗಿ ಕಾಳಜಿ ಮಾಡುತ್ತದೆ. ಮಗು ಮನೆಗೆ ಮರಳಿದ ನಂತರ ಶಾಲೆಯಲ್ಲಿ ಅಂದಿನ ದಿನದ ಪಾಠವನ್ನು ಪಾಲಕರು ಕೇಳಬೇಕು. ಅವರ ಮನೆಗೆಲಸದ ಕಡೆಗೆ ಪಾಲಕರು ಗಮನ ನೀಡಿ ಮಕ್ಕಳು ಅಂದಿನ ಮನೆಗೆಲಸವನ್ನು ಅಂದೇ ಮಾಡುವಂತೆ ಪ್ರೇರಣೆ ನೀಡಬೇಕು. ಇದರಿಂದ ನಿಮ್ಮ ಮಕ್ಕಳು ಓದಿನಲ್ಲಿ ಚುರುಕಾಗುತ್ತಾರೆ, ಭವಿಷ್ಯದಲ್ಲಿ ಜಾಣರಾಗುತ್ತಾರೆ ಎಂದು ಹೇಳಿದರು.
ಶಾಲೆಗೆ ಬಂದ ಮಕ್ಕಳನ್ನು ಗುಲಾಬಿ ಹೂ ನೀಡಿ ಸ್ವಾಗತಿಸಿದರು. ಶಾಲೆಗೆ ಬಂದ ಮಕ್ಕಳಿಗೆಲ್ಲ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಈವೇಳೆ ಶಿಕ್ಷಕಿಯರಾದ ಎಲ್.ಎಸ್. ಶಿವಪ್ಪಗೌಡರ, ಎಲ್.ಎಸ್. ಗಂಗಾಪೂರ, ಎನ್.ಎ. ಹುಬಳೀಕರ, ಶಿಕ್ಷಕರಾದ ಬಿ.ಎಸ್. ಕರಮುಡಿ, ಜೆ.ಡಿ. ಶಾಲದಾರ, ಪಾಲಕರು ಉಪಸ್ಥಿತರಿದ್ದರು.