ವಿಜಯಪುರ:-ಜಿಲ್ಲೆಯ ನಿಡಗುಂದಿ ಪಟ್ಟಣದ ಎನ್ಎಚ್ 50ರಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಬಿಎಸ್ಎಫ್ ಯೋಧ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ. ಲಾರಿ, ಬೈಕ್ ಹಾಗೂ ಆ್ಯಂಬುಲೆನ್ಸ್ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ನಲ್ಲಿದ್ದ ಬಿಎಸ್ಎಫ್ ಯೋಧ ಸಾವಿಗೀಡಾಗಿದ್ದಾರೆ.
35 ವರ್ಷದ ಮೌನೇಶ ರಾಠೋಡ್ ಮೃತ ಯೋಧ. ಇವರು ಮುದ್ದೇಬಿಹಾಳ ತಾಲೂಕಿನ ಕಾಳಗಿ ಗ್ರಾಮದ ನಿವಾಸಿ ಎನ್ನಲಾಗಿದೆ. ಲಾರಿ ಬೈಕ್ಗೆ ಡಿಕ್ಕಿಯಾದ ಬಳಿಕ ಬೈಕ್ ಸಮೇತ ಎಳೆದುಕೊಂಡು ಎದುರಿಗೆ ಬರುತ್ತಿದ್ದ ಆ್ಯಂಬುಲೆನ್ಸ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಅಂಬುಲೆನ್ಸ್ ಚಾಲಕ ಕೇರಳ ಮೂಲದ ರಿತೇಶ್ ಎಂಬಾತನ ಸ್ಥಿತಿ ಚಿಂತಾಜನಕವಾಗಿದೆ.
ಕ್ರೇನ್ ಮೂಲಕ ಲಾರಿ ಹಾಗೂ ಆ್ಯಂಬುಲೆನ್ಸ್ ಅನ್ನು ಬೇರ್ಪಡಿಸಿ ಚಾಲಕ ರಿತೇಶ್ನನ್ನ ಪೊಲೀಸರು ಹೊರ ತೆಗೆದಿದ್ದಾರೆ. ಗಾಯಾಳು ರಿತೇಶ್ನನ್ನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ನಿಡಗುಂದಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಹಾಗೂ ಅಪಘಾತಕ್ಕೀಡಾದ ಲಾರಿ, ಆ್ಯಂಬುಲೆನ್ಸ್ ಹಾಗೂ ಬೈಕ್ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.