ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಸೇವೆಯಲ್ಲಿ ಇರುವಷ್ಟು ದಿನ ನೊಂದವರ-ಬಡವರ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸಿದ ರವಿ ಗುಂಜೀಕರರು ನಿವೃತ್ತಿ ನಂತರವೂ ತಮ್ಮ ಸೇವಾಕಾರ್ಯ ಮುಂದುವರೆಸಿದ್ದು, ಅಸಹಾಯಕರಿಗೆ ಸೇವೆ ಸಲ್ಲಿಸುವುದು ರವಿ ಗುಂಜೀಕರರ ಜಾಯಮಾನವಾಗಿದೆ ಎಂದು ರವಿ ಗುಂಜೀಕರ ಅಭಿಮಾನಿ ಬಳಗದ ಉಪಾಧ್ಯಕ್ಷ ಡಾ. ಎಸ್.ಆರ್. ಹಿರೇಮಠ ನುಡಿದರು.
ಅವರು ನಗರದ ಕೆ.ಎಚ್. ಪಾಟೀಲ ಜಿಲ್ಲಾಸ್ಪತ್ರೆ (ಜಿಮ್ಸ್)ಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾಜಿ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ರವಿ ಎಲ್.ಗುಂಜೀಕರ ಅವರ ನಿವೃತ್ತಿ ಅಂಗವಾಗಿ ರೋಗಿಗಳಿಗೆ ಹಣ್ಣು-ಹಂಪಲುಗಳುಳ್ಳ ಪೋಷಕಾಂಶಯುಕ್ತ ಆಹಾರದ ಕಿಟ್ ವಿತರಣೆ ಸಂದರ್ಭದಲ್ಲಿ ಮಾತನಾಡಿದರು.
ರಕ್ತದಾನ, ಮಹಿಳಾ ದಿನಾಚರಣೆ, ಸಸಿ ನೆಡುವ ಕಾರ್ಯಕ್ರಮ ಸೇರಿದಂತೆ ಇಂದು ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಮಾಜಕ್ಕೆ ಸೇವೆ ಸಲ್ಲಿಸುವ ಪ್ರವೃತ್ತಿ ಕೇವಲ ವೃತ್ತಿ-ಅಧಿಕಾರಕ್ಕೆ ಸೀಮಿತವಲ್ಲ ಎನ್ನುವುದನ್ನು ರವಿ ಗುಂಜೀಕರ ನಿರೂಪಿಸಿದ್ದಾರೆ ಎಂದರು.
ರವಿ ಗುಂಜೀಕರ ಹಾಗೂ ಅವರ ಅಭಿಮಾನಿ ಬಳಗದ ಸದಸ್ಯರು ನೂರಾರು ರೋಗಿಗಳಿಗೆ ಹಣ್ಣು-ಹಂಪಲಿನ ಕಿಟ್ ವಿತರಿಸಿದರು, ಈ ಸಂದರ್ಭದಲ್ಲಿ ಗುಂಜೀಕರ ಅವರು ರೋಗಿಗಳ ಆಶೋತ್ತರ ಆಲಿಸಿ ಸಾಂತ್ವನ ಹೇಳಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಸವರಾಜ ಬಳ್ಳಾರಿ, ರವಿ ಗುಂಜೀಕರ ಅಭಿಮಾನಿ ಬಳಗದ ಅಧ್ಯಕ್ಷ ಅರುಣಕುಮಾರ ಚವ್ಹಾಣ, ಕಾರ್ಯದರ್ಶಿ ಕೆ.ಎಫ್. ಹಳ್ಯಾಳ, ಆರ್.ಎಂ. ನಿಂಬನಾಯ್ಕರ, ಮಂಜು ಮಾನೆ, ಶಿವಾಜಿ ಪಾವನ, ರೇಡಿಯಾಲಜಿಸ್ಟ್ ಲಕ್ಷ್ಮಣ ಮುದುಡಿ, ನಾಗೇಂದ್ರ ಯಳಮಲಿ ಮುಂತಾದವರಿದ್ದರು.