HomeKarnataka Newsಸೇವಾದಳ ಕಾಂಗ್ರೆಸ್ ಪಕ್ಷದ ಆಧಾರಸ್ತಂಭ: ಡಿಸಿಎಂ ಡಿ.ಕೆ. ಶಿವಕುಮಾರ್

ಸೇವಾದಳ ಕಾಂಗ್ರೆಸ್ ಪಕ್ಷದ ಆಧಾರಸ್ತಂಭ: ಡಿಸಿಎಂ ಡಿ.ಕೆ. ಶಿವಕುಮಾರ್

For Dai;y Updates Join Our whatsapp Group

Spread the love

ಬೆಂಗಳೂರು: ಸೇವಾದಳ ಕಾಂಗ್ರೆಸ್ ಪಕ್ಷದ ಆಧಾರಸ್ತಂಭ. ಪಕ್ಷದಲ್ಲಿ ನೀವು ಎಲ್ಲರಿಗಿಂತ ಕೊನೆ ಎಂಬ ಭಾವನೆ ಬೇಡ. ತಾಲೂಕು, ಜಿಲ್ಲಾ ಮಟ್ಟದಲ್ಲಿ ಸೇವಾದಳದವರಿಗೂ ಅಧಿಕಾರ ನೀಡುವ ಆಲೋಚನೆ ಮಾಡಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಭಾರತ್ ಜೋಡೋ ಭವನದಲ್ಲಿ ಭಾನುವಾರ ನಡೆದ ಭಾರತೀಯ ಸೇವಾದಳದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ಸಮಾಜ ಸೇವೆ ಮಾಡುವವರನ್ನು ಹೆಚ್ಚು ಗುರುತಿಸುತ್ತದೆ. ಹೀಗಾಗಿ ನಮ್ಮ ಸಮಾಜದಲ್ಲಿ ರಾಮನ ತಂದೆ ದಶರಥ ಮಹಾರಾಜನಿಂಗಿಂತ, ರಾಮನ ಭಂಟ ಹನುಮಂತನ ದೇವಾಲಯಗಳು ಹೆಚ್ಚಾಗಿವೆ. ಅದೇ ರೀತಿ ನೀವು ಕಾಂಗ್ರೆಸ್ ಪಕ್ಷಕ್ಕೆ ಆಧಾರಸ್ತಂಭ. ಇದನ್ನು ಸೇವಾದಳದ ಎಲ್ಲಾ ಕಾರ್ಯಕರ್ತರು ತಲೆಯಲ್ಲಿಟ್ಟುಕೊಳ್ಳಬೇಕು” ಎಂದು ಹೇಳಿದರು.

“ದೇಶದ ಭದ್ರತೆ ಉದ್ದೇಶದಿಂದ ಸ್ಥಾಪನೆಯಾದ ವಿಭಾಗ ಸೇವಾದಳ. ನೆಹರೂ ಅವರ ಅವಧಿಯಲ್ಲಿ ಪ್ರಾರಂಭವಾಗಿ ಈಗ ಮಲ್ಲಿಕಾರ್ಜುನ ಖರ್ಗೆ ಅವರ ಅವಧಿವರೆಗೆ ನಡೆದುಕೊಂಡು ಬಂದಿದೆ. ಸೇವಾದಳ ಕಾಂಗ್ರೆಸ್ ಪಕ್ಷದ ಕಡೆಯ ಅಂಗ, ನಮ್ಮನ್ನು ಗುರುತಿಸುವುದಿಲ್ಲ ಎಂಬ ಆಲೋಚನೆಯನ್ನು ನಿಮ್ಮ ತಲೆಯಿಂದ ಕಿತ್ತೊಗೆಯಬೇಕು. ನಿಮ್ಮಲ್ಲಿ ನಾಯಕತ್ವದ ಗುಣ ಇದೆ ಎಂದು ನೆಹರೂ ಹಾಗೂ ಇಂದಿರಾ ಗಾಂಧಿ ಅವರೇ ಸೇವಾದಳದ ಅಧ್ಯಕ್ಷ ಸ್ಥಾನ ವಹಿಸಿದ್ದರು” ಎಂದರು.

“ಸೇವಾದಳದವರು ಹಾಕುವ ಗಾಂಧಿ ಟೋಪಿಯನ್ನು ಎಲ್ಲಾ ನಾಯಕರು ಹಾಕುತ್ತಾರೆ. ಬೆಳಗಾವಿ ಅಧಿವೇಶನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ನಾಯಕರೂ ಇದನ್ನು ಧರಿಸಿದ್ದರು. ಬೇರೆ ನಾಯಕರ ಜತೆಗೆ ನೀವು ಸರಿಸಮಾನರು. ಬಿ.ಕೆ. ಹರಿಪ್ರಸಾದ್ ಅವರು ರಾಷ್ಟ್ರೀಯ ಸೇವಾದಳದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಸಂಸತ್ ಸದಸ್ಯರಾಗಿದ್ದಾರೆ. ಇನ್ನು ಅನೇಕರು ಸೇವಾದಳದಲ್ಲಿ ಕೆಲಸ ಮಾಡಿದ್ದಾರೆ. ಅವರು ಶಾಸಕರು, ಮಂತ್ರಿಗಳಾಗಿ ದೊಡ್ಡ ನಾಯಕರಾಗಿ ಬೆಳೆದಿದ್ದಾರೆ” ಎಂದು ತಿಳಿಸಿದರು.

“ನಾವು ಹುಟ್ಟಿದ ಮೇಲೆ ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕು. ನನ್ನಿಂದ ಏನೂ ಸಾಧ್ಯವಿಲ್ಲ ಎಂಬ ಆಲೋಚನೆ ಮಾಡಬಾರದು. ನೀವು ಶಾಸಕರು, ಮಂತ್ರಿ, ಮುಖ್ಯಮಂತ್ರಿ ಆಗಬಹುದು. ನೀವು ನಿಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಒಳ್ಳೆಯ ಕಾಲ ಬರುತ್ತಿದೆ. ಬ್ಲಾಕ್ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಅವರು ಹಾಗೂ ರಾಹುಲ್ ಗಾಂಧಿ ಅವರು ಜಿಲ್ಲಾ ಕಾಂಗ್ರೆಸ್ ಗೆ ಹೊಸ ಸ್ವರೂಪ ನೀಡಲು ಪ್ರಯತ್ನಿಸುತ್ತಿದ್ದಾರೆ” ಎಂದರು.

“ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಆಯ್ಕೆ ಸಮಿತಿಯು ಸೇವಾದಳ ಸೇರಿದಂತೆ ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್ ಅಭಿಪ್ರಾಯ ಸ್ವೀಕರಿಸುವ ಕೆಲಸ ಮಾಡಲಿದೆ. ನಿಮ್ಮ ಸೇವೆಯನ್ನು ನಾವು ಗಮನದಲ್ಲಿಟ್ಟುಕೊಂಡಿದ್ದೇವೆ. ಸೇವಾದಲದಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸಬೇಕು. ಭಾರತ ಜೋಡೋ ಸಂದರ್ಭದಲ್ಲಿ ನಾವು ಅನೇಕ ಜಾಗಗಳನ್ನು ಗುರುತಿಸಿದ್ದು, ಶಾಶ್ವತ ಕಾಂಗ್ರೆಸ್ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು. ಮಂಗಳೂರಿನಲ್ಲೂ ಜಾಗ ನೋಡಿದ್ದೇವೆ. ಇದರ ಜವಾಬ್ದಾರಿಯನ್ನು ಸೇವಾದಳದವರಿಗೂ ವಹಿಸಲಾಗುವುದು” ಎಂದರು.

“ನಾವು ಈಗ ಬುದ್ಧಿ ಕಲಿತು ನಮ್ಮ ಆಧಾರಸ್ತಂಭಗಳನ್ನು ಹೇಗೆ ಬೆಳಸಬೇಕು ಎಂದು ಆಲೋಚಿಸುತ್ತಿದ್ದೇವೆ. ಮುಂದಿನದಿನಗಳಲ್ಲಿ ಪ್ರತಿ ವಿಚಾರದಲ್ಲೂ ಜಿಲ್ಲಾ ಕಾಂಗ್ರೆಸ್ ಅಭಿಪ್ರಾಯ ಸಂಗ್ರಹಹಿಸಲು, ಅವರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಅವರೇ ರಾಜ್ಯಕ್ಕೆ ಬಂದು ಜಿಲ್ಲಾಧ್ಯಕ್ಷರ ಜತೆ ನೇರವಾಗಿ ಚರ್ಚೆ ಮಾಡಲಿದ್ದಾರೆ” ಎಂದು ಹೇಳಿದರು.

“ಸೇವಾದಳದವರು ಒಂದು ತಂಡ ರಚನೆ ಮಾಡಿ ಪ್ರತಿ ಜಿಲ್ಲೆಗೆ ಹೋಗಿ ಅಲ್ಲಿ ಸೇವಾದಳ ಹೊರತಾದ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ಧ್ವಜಾರೋಹಣ, ರಾಷ್ಟ್ರಗೀತೆ, ವಂದೇ ಮಾತರಂ ಗೀತೆ ಗಾಯನ ಸೇರಿದಂತೆ ಇತರೆ ಅಂಶಗಳ ತರಬೇತಿ ನೀಡಬೇಕು ಎಂದು ಸೇವಾದಳದ ಅಧ್ಯಕ್ಷರಾದ ರಾಮಚಂದ್ರಪ್ಪ ಅವರಿಗೆ ಸೂಚಿಸುತ್ತೇನೆ. ಈ ರೀತಿ ಮಾಡಿದಾಗ ಬೇರೆ ಕಾರ್ಯಕರ್ತರು ಸೇವಾದಳದ ಜತೆ ಬೆರೆಯುತ್ತಾರೆ” ಎಂದು ಸಲಹೆ ನೀಡಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!