‘ರನ್’, ‘ಗಲ್ಲಿ ಬಾಯ್’, ‘ಗಂಗೂಬಾಯಿ ಕಾಠಿಯಾವಾಡಿ’, ‘ವೆಲ್ಕಮ್’ ಸೇರಿದಂತೆ ಇನ್ನು ಹಲವು ಸೂಪರ್ ಹಿಟ್ ಹಿಂದಿ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಘಳಿಸಿದ್ದ ಬಾಲಿವುಡ್ ಖ್ಯಾತ ನಟ ವಿಜಯ್ ರಾಜ್ ವಿರುದ್ಧ ಕೇಳಿ ಬಂದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಖುಲಾಸೆಗೊಂಡಿದೆ. ನಟನ ಮೇಲೆ 2020 ರಲ್ಲಿ ನಟಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಹಾರಾಷ್ಟ್ರ ನ್ಯಾಯಾಲಯವು ವಿಜಯ್ ರಾಜ್ ಅವರನ್ನು ಆರೋಪದಿಂದ ಮುಕ್ತಗೊಳಿಸಿದೆ.
2020ರಲ್ಲಿ ವಿದ್ಯಾ ಬಾಲನ್ ನಟನೆಯ ‘ಶೇರ್ನಿ’ ಸಿನಿಮಾದ ಚಿತ್ರೀಕರಣದ ವೇಳೆ ವಿಜಯ್ ರಾಜ್ ವಿರುದ್ಧ ಸಹನಟಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದು ಈ ಬಗ್ಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಕೆಳಹಂತದ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ವಿಜಯ್ ಅವರನ್ನು ಪ್ರಕರಣದಿಂದ ಖುಲಾಸೆ ಮಾಡುತ್ತಿರುವುದಾಗಿ ಹೇಳಿದೆ.
ವಿಜಯ್ ರಾಜ್ ವಿರುದ್ಧ ಸೆಕ್ಷನ್ 354-ಎ (ಲೈಂಗಿಕ ದೌರ್ಜನ್ಯ), ಸೆಕ್ಷನ್ 354-ಡಿ (ಕೆಟ್ಟ ಉದ್ದೇಶದಿಂದ ಹಿಂದೆ ಬೀಳುವುದು) ಹೇರಲಾಗಿತ್ತು. ಆದರೆ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗೆ ಹೆಚ್ಚಿನ ಸಾಕ್ಷ್ಯಗಳು ಸಿಗಲಿಲ್ಲ. ದೋಷಾರೋಪ ಪಟ್ಟಿಯಲ್ಲಿಯೂ ಸಹ ವಿಜಯ್ ರಾಜ್ ವಿರುದ್ಧ ಆರೋಪ ಗಟ್ಟಿಯಾಗಿ ಇರಲಿಲ್ಲ. ಆರೋಪಿ ಪರ ವಕೀಲರು, ತನಿಖಾಧಿಕಾರಿ ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪವನ್ನು ಸಹ ಮಾಡಿದ್ದರು. ಎಲ್ಲ ಸಾಕ್ಷ್ಯಗಳನ್ನು ಪರಿಗಣಿಸಿದ ಬಳಿಕ ವಿಜಯ್ ರಾಜ್ ಅವರನ್ನು ಆರೋಪದಿಂದ ಖುಲಾಸೆ ಮಾಡಲಾಗಿದೆ.
ಈ ಹಿಂದೆಯೂ ವಿಜಯ್ ರಾಜ್ ವಿರುದ್ಧ ಕೆಲವು ಆರೋಪಗಳು ಕೇಳಿ ಬಂದಿದ್ದವು. ಸೆಟ್ನಲ್ಲಿ ಹಿರಿಯ ನಟರಿಗೆ ಗೌರವ ನೀಡುವುದಿಲ್ಲ ಎಂಬ ಆರೋಪ ವಿಜಯ್ ರಾಜ್ ಮೇಲೆ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ‘ಸನ್ ಆಫ್ ಸರ್ದಾರ್’ ಸಿನಿಮಾದಿಂದ ಅವರನ್ನು ತೆಗೆದು ಹಾಕಲಾಗಿತ್ತು. ಈ ಹಿಂದೆ ವಿದೆಶದಲ್ಲಿ ಒಮ್ಮೆ ಬಂಧನಕ್ಕೆ ಸಹ ಒಳಗಾಗಿದ್ದರು.