ಕನ್ನಡದ ಕಿರುತೆರೆ ಹಾಗೂ ಹಿರಿತೆರೆಯ ಜನಪ್ರಿಯ ನಟಿಯಾಗಿದ್ದ ಶೋಭಿತಾ ಶಿವಣ್ಣ ಸಾವನ್ನಪ್ಪಿ ಮೂರು ದಿನ ಕಳೆದಿದೆ. ಕಳೆದ ಭಾನುವಾರ ಹೈದರಾಬಾದ್ ನ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಶೋಭಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶೋಭಿತಾ ಶವವನ್ನು ಅವರ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ಶೋಭಿತಾ ಅವರ ಮೃತದೇಹವನ್ನು ನೋಡಿದ ನೂರಾರು ಸ್ನೇಹಿತರು, ಬಂಧುಗಳು ಕಣ್ಣೀರು ಹಾಕಿದ್ದಾರೆ.
ಕಳೆದ 3 ದಿನಗಳ ಹಿಂದೆ ಕಿರುತೆರೆ ನಟಿ ಶೋಭಿತಾ ಶಿವಣ್ಣ ಅವರು ಹೈದರಾಬಾದ್ನಲ್ಲಿ ಸಾವನ್ನಪ್ಪಿದ್ದರು. ಪೋಸ್ಟ್ ಮಾರ್ಟಂ ಹಾಗೂ ಪೊಲೀಸರ ಪರಿಶೀಲನೆ ಬಳಿಕ ಮೃತದೇಹವನ್ನು ಶೋಭಿತಾ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.
ಶೋಭಿತಾ ಶಿವಣ್ಣ ಅವರ ಮೃತದೇಹವನ್ನು ಇಂದು ಸಕಲೇಶಪುರ ತಾಲ್ಲೂಕಿನ ಹೇರೂರಿಗೆ ತರಲಾಗಿತ್ತು. ನೂರಾರು ಸ್ನೇಹಿತರು, ಅಕ್ಕಂದಿರು, ಕುಟುಂಬ ಸದಸ್ಯರು ಅಗಲಿದ ನಟಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ತಮ್ಮೂರಿನ ಮಗಳನ್ನ ಕಳೆದುಕೊಂಡಿದ್ದಕ್ಕೆ ಹುಟ್ಟೂರಿನ ಜನ ಕಣ್ಣೀರಿಟ್ಟಿದ್ದಾರೆ.
ಮದುವೆ ಬಳಿಕ ಹೈದಾರಬಾದ್ಗೆ ತೆರಳಿ ಪತಿಯೊಂದಿಗೆ ವಾಸವಿದ್ದ ಶೋಭಿತಾ ತಮ್ಮ ಜೀವನವನ್ನು ಕೊನೆಯಾಗಿಸಿದ್ದಾರೆ. ಸಂಸಾರದಲ್ಲಿಯೂ ಯಾವುದೇ ತೊಂದರೆ ಇಲ್ಲದೇ ಎಲ್ಲರೊಂದಿಗೆ ನಗು ನಗುತಾ ಇದ್ದ ಶೋಭಿತಾ ಶಿವಣ್ಣ ಯಾಕೆ ಇಂತಹ ದುಡುಕಿನ ನಿರ್ಧಾರ ತೆಗೆದುಕೊಂಡರು ಎನ್ನುವುದು ಎಲ್ಲರನ್ನೂ ಕಾಡುತ್ತಿದೆ.
ಮರಣೋತ್ತರ ಪರೀಕ್ಷೆಯಲ್ಲಿ ಆತ್ಮಹತ್ಯೆ ಎಂಬುದು ಖಚಿತವಾಗಿದೆ. ಶೋಭಿತಾ ತಾವೇ ಸಾವಿಗೆ ಶರಣಾಗಿರುವ ಬಗ್ಗೆ ಖಚಿತವಾಗಿದ್ದು, ಈ ವರದಿ ಕೊಲೆ ಎನ್ನುವ ಅನುಮಾನವನ್ನು ತೆಗೆದುಹಾಕಿದೆ. ಬಹಳ ಕಷ್ಟದಲ್ಲಿ ಬೆಳೆದ ಶೋಭಿತಾ ಶಿವಣ್ಣ ಅವರು ಹುಟ್ಟೂರಿನಲ್ಲಿ ಒಂದು ಮನೆಯನ್ನು ಕಟ್ಟಿಸಿದ್ದರು. ಮದುವೆಯಾಗಿ ಒಂದೂವರೆ ವರ್ಷ ಆಗಿತ್ತು ಅಷ್ಟೇ. ದೇವರ ಕಾರ್ಯಕ್ಕೆ ಬಂದು ಹೋಗುತ್ತಿದ್ದರು. ಶೋಭಿತಾ ಅವರು ಸಾಕಷ್ಟು ಎತ್ತರಕ್ಕೆ ಬೆಳೆಯಬೇಕಿತ್ತು. ಅಕ್ಕ-ತಂಗಿಯರು, ಮನೆಯವರು ಸಾಕಷ್ಟು ಪ್ರೋತ್ಸಾಹ ನೀಡಿದ್ದರು ಎಂದು ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರು ಶೋಭಿತಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಶೋಭಿತಾ ಅವರ ತಂದೆಯ ಜಮೀನಿನಲ್ಲಿ ಕುಟುಂಬ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಎಲ್ಲವೂ ಸರಿ ಇದ್ದ ಮೇಲೆ ಶೋಭಿತಾ ಶಿವಣ್ಣ ಯಾಕೆ ಸಾವಿಗೆ ಶರಣಾದರು ಎನ್ನುವ ಅನುಮಾನ ಎಲ್ಲರನ್ನೂ ಕಾಡುತ್ತಿದೆ.