ಧಾರವಾಡ: ಶ್ಯಾಮನೂರ್ ಗೆ ವಯಸ್ಸಾಯ್ತು, ಹೀಗಾಗಿ ಅವರು ಮನೆಯಲ್ಲಿ ಕುಳಿತುಕೊಳ್ಳೋದು ಒಳಿತು ಎಂದು ಹೇಳುವ ಮೂಲಕ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶ್ಯಾಮನೂರ್ ವಿರುದ್ಧ ಅರವಿಂದ್ ಬೆಲ್ಲದ್ ಕಿಡಿಕಾರಿದ್ದಾರೆ.
ಶ್ಯಾಮನೂರು ಅವರು ಯತ್ನಾಳ್ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬೆಲ್ಲದ್, ಬಸವಣ್ಣ ಇರುವ ಅನುಭವ ಮಂಟಪ ಇವತ್ತು ಅನುಭವ ಮಂಟಪ ಆಗಿ ಉಳಿದಿಲ್ಲ. ಅಲ್ಲಿ ಪೀರ್ ಭಾಷಾ ಅವರ ಒಂದು ಪೀರ್ ನಡೆಯುತ್ತಿದೆ. ಈ ಸರ್ಕಾರ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಂದೇ ಒಂದು ರೂ. ಹಣ ಬಿಡುಗಡೆ ಮಾಡಿಲ್ಲ ಅದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶ್ಯಾಮನೂರು ಚಕಾರ ಎತ್ತಿಲ್ಲ ಎಂದರು.
ಯತ್ನಾಳ್ ಬಗ್ಗೆ ಶ್ಯಾಮನೂರು ಅವರ ಬಾಯಲ್ಲಿ ಆ ರೀತಿಯ ಪದ ಬರಬಾರದು. ಅದು ಅವರಿಗೆ ಶೋಭೆ ತರುವಂತದ್ದಲ್ಲ. ಒಣ ಬಾವಿಯಲ್ಲಿ ದೂಡಬೇಕು ಎಂದರೆ ಏನು? ಯತ್ನಾಳ್ ಅವರು ಹೇಳಿದ್ದು ಸರಿ ಇದೆ. ಶ್ಯಾಮನೂರು ಅವರು ಬಸವ ಕಲ್ಯಾಣದಲ್ಲಿ ಏನು ಮಾಡಿದ್ದಾರೆ? ಅವರಿಗೆ ವಯಸ್ಸಾಗಿದೆ. ಅವರು ಮನೆಯಲ್ಲಿ ಕುಳಿತುಕೊಳ್ಳೋದು ಒಳ್ಳೆಯದು. ಈ ರೀತಿ ಬಾಯಿಗೆ ಬಂದಂತೆ ಮಾತನಾಡೋದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಯತ್ನಾಳ್ ಹಾಗೂ ವಿಜಯೇಂದ್ರ ತಂಡದ ಮಧ್ಯೆ ಹೈಕಮಾಂಡ್ ಮಧ್ಯೆ ಪ್ರವೇಶಿಸಿರುವ ವಿಚಾರವಾಗಿ, ಪಕ್ಷದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ. ಪಕ್ಷದಲ್ಲಿ ಇದ್ದ ಗೊಂದಲ ಹೈಕಮಾಂಡ್ ಮಧ್ಯಸ್ಥಿಕೆಯಿಂದ ಶಾಂತವಾಗಿದೆ. ಲಕ್ಷಾಂತರ ಕಾರ್ಯಕರ್ತರಿಗೆ ಸಂತೋಷವಾಗಿದೆ ಎಂದರು.