ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಅನೇಕ ಹೋರಾಟಗಾರರು, ಸಾಹಿತಿಗಳ ಅವಿರತ ಹೋರಾಟದ ಸಮಗ್ರ ಚಿತ್ರಣವನ್ನು ಹಳೆಯ ಪತ್ರಿಕೆಗಳ ಸಂಗ್ರಹದ ಮೂಲಕ ಪ್ರದರ್ಶನಗೊಳಿಸಿದ ಗದಗಿನ ಚಿತ್ರಕಲಾವಿದ ಶಂಕರಗೌಡ ಪಾಟೀಲರ ಕಾರ್ಯ ಅವಿಸ್ಮರಣೀಯವಾಗಿದೆ ಎಂದು ಜಿಲ್ಲಾ ಕ.ಸಾ.ಪ. ಮಾಜಿ ನಿಕಟ ಪೂರ್ವ ಅಧ್ಯಕ್ಷ ವೀರಣ್ಣ ನಿಂಗೋಜಿ ಹೇಳಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು, ಹೊಸಳ್ಳಿ ಗ್ರಾಮದ ವೀರರಾಣಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಕರ್ನಾಟಕ ಏಕೀಕರಣ ನಾಡು-ನುಡಿ ವೈಭವವನ್ನು ಅಪರೂಪದ ಹಳೆಯ ಪತ್ರಿಕೆಗಳ ಲೇಖನಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿನಿಯರು ಎಲ್ಲ ಮಹನೀಯರ ಸಮಗ್ರ ಮಾಹಿತಿಯನ್ನು ಓದಿಕೊಂಡು ಹೆಚ್ಚು ಜ್ಞಾನಾರ್ಜನೆಯನ್ನು ಮಾಡಬೇಕೆಂದರು.
ಗದುಗಿನ ಚಿತ್ರಕಲಾವಿದ ಶಂಕರಗೌಡ ಪಾಟೀಲ ಮಾತನಾಡಿ, ನಾನು ಚಿತ್ರಕಲಾಕೃತಿಗಳ ಪ್ರದರ್ಶನ ಮಾಡುವುದರ ಜೊತೆಗೆ ರಂಗಭೂಮಿ, ಸ್ವಾತಂತ್ರ್ಯ ಹೋರಾಟ ಐತಿಹಾಸಿಕ ಪರಂಪರೆ, ಕರ್ನಾಟಕ ಏಕೀಕರಣ, ನಾಡು-ನುಡಿಗಾಗಿ ಸೇವೆ ಸಲ್ಲಿಸಿದ ಮಹನೀಯರ ಹಳೆಯ ಪತ್ರಿಕಾ ಲೇಖನಗಳನ್ನು ಸಂಗ್ರಹಿಸಿ ಅವುಗಳನ್ನು ಶಾಲಾ-ಕಾಲೇಜು ಸಾಹಿತ್ಯ ಸಮ್ಮೇಳನ, ವಿವಿಧ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಾ ಬಂದಿದ್ದೇನೆ. ಇದು ನನಗೆ ತೃಪ್ತಿ ತಂದಿದೆ ಎಂದು ಹೇಳಿದರು.
ಕರವೇ ಜಿಲ್ಲಾ ಕಾರ್ಯಾಧ್ಯಕ್ಷ ರಾಜಶೇಖರ ಶ್ಯಾಗೋಟಿ ಹಾಗೂ ತಾ.ಚು.ಸಾ.ಪ. ಅಧ್ಯಕ್ಷ ಶಿವಮೂರ್ತಿ ಇಟಗಿ ಹಾಗೂ ಕನ್ನಡ ಜಾಗೃತಿ ಸಮಿತಿ ಮಾಜಿ ಸದಸ್ಯೆ ಎಸ್.ಕೆ. ದಾನಕೈ ಮಾತನಾಡಿದರು.
ವಸತಿ ಶಾಲೆಯ ಶಿಕ್ಷಕರಾದ ಕಳಕೇಶ ಅರಕೇರಿ, ಪುರೋಷತ್ತಮ ಪೂಜಾರ, ವಿಜಯಕುಮಾರ ದೊಡ್ಡಮನಿ, ರವೀಂದ್ರ ಮಾಳೆಕೊಪ್ಪ, ಹನುಮಪ್ಪ ಬಡಿಗೇರ, ಶಂಕರ ಇಂಗಳದಳ, ಶಾಂತಾವೀರಯ್ಯ ಬಲವಂಚಿಮಠ, ಶಿವಲೀಲಾ ಜಕ್ಕಲಿ, ರಾಜೇಶ್ವರಿ ಬಿರಾದಾರ, ಮಲ್ಲಿಕಾರ್ಜುನ ಅಂಗಡಿ ಮತ್ತಿತರರು ಇದ್ದರು.
ವಿದ್ಯಾರ್ಥಿನಿಯರಾದ ಚಿತ್ರಾ ಪೂಜಾರ ಸ್ವಾಗತಿಸಿದರು. ಶುಭಾಪ್ರಿಯ ಲಮಾಣಿ ಸಂಗಡಿಗರು ಪ್ರಾರ್ಥಿಸಿದರು. ವಾಣಿ ಬಿರಾದಾರ ನಿರೂಪಿಸಿದರು. ನಂದಾ ಡೇನಕನಹಳ್ಳಿ ವಂದಿಸಿದರು.
ವಸತಿ ಶಾಲೆಯ ಪ್ರಾಚಾರ್ಯ ವ್ಹಿ.ಬಿ. ಹನುಮಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕ ಏಕೀಕರಣದಲ್ಲಿ ಸಾಕಷ್ಟು ಹೋರಾಟಗಾರರು ಹೋರಾಡಿ ಏಕೀಕರಣವನ್ನು ಸಾಕಾರಗೊಳಿಸಿದ್ದಾರೆ. ಅಂತಹ ಮಹನೀಯರ ಜೀವನ ಚರಿತ್ರೆ, ಹೋರಾಟದ ನೆನಪುಗಳ ಇತಿಹಾಸದ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿನಿಯರು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳನ್ನು, ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಾಗ ನಿಮ್ಮ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಲಿದೆ ಎಂದರು.


