ವಿಜಯಸಾಕ್ಷಿ ಸುದ್ದಿ, ಗದಗ: ತಂತ್ರಜ್ಞಾನದ ಆವಿಷ್ಕಾರದಲ್ಲಿ ಸಿಲುಕಿರುವ ಸಂದರ್ಭದಲ್ಲಿಯೂ ಇತಿಹಾಸದ ಗರ್ಭದಲ್ಲಿ ಸೇರಿರುವ ಹಳೆ ತಲೆಮಾರಿನ ರಂಗಭೂಮಿಯ ಕಲಾವಿದರ ಪಾತ್ರಗಳ ಛಾಯಾಚಿತ್ರ, ಹಳೆಯ ಪತ್ರಿಕಾ ಲೇಖನಗಳ ಪ್ರದರ್ಶನದ ಮೂಲಕ ಜನಸಮೂಹಕ್ಕೆ ಪರಿಚಯಿಸುತ್ತಿರುವ ಕಾರ್ಯ ಅತೀ ಮಹತ್ವದ್ದಾಗಿದೆ. ಚಿತ್ರಕಲಾವಿದ, ವಿಶಿಷ್ಟ ಹವ್ಯಾಸದ ಶಂಕರಗೌಡ ಪಾಟೀಲ ಈ ಕಾರ್ಯ ಮುಂದುವರೆಸಲೆಂದು ಗದುಗಿನ ಉಭಯ ಶ್ರೀಗಳ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ 79ನೇ ಪ್ರದರ್ಶನವನ್ನು ಉದ್ಘಾಟಿಸಿದ ಪರಮಪೂಜ್ಯ ಶ್ರೀ ಕಲ್ಲಯ್ಯಜ್ಜನವರು ಆಶೀರ್ವದಿಸಿದರು.
ರಂಗಕಲಾವಿದ ಬಿ. ಬಾಬು ಮಾತನಾಡುತ್ತಾ, ಶಂಕರಗೌಡ ಪಾಟೀಲ ರಾಜ್ಯದ ರಾಜಧಾನಿಯಿಂದ ಹಿಡಿದು ರಾಜ್ಯದ ತುಂಬೆಲ್ಲಾ ಸುತ್ತಾಡಿ 79 ಪ್ರದರ್ಶನ ನೀಡಿ ಜನಮೆಚ್ಚುಗೆ ಪಾತ್ರರಾಗಿದ್ದಾರೆ. ಅವರ ಕಾರ್ಯಕ್ಕೆ ಕಲಾವಿದರು, ಜನಮಸಮುದಾಯ ಸ್ಪಂದಿಸಬೇಕು, ಸರ್ಕಾರ ಗಮನಹರಿಸಿ ಪ್ರೋತ್ಸಾಹಿಸಬೇಕೆಂದು ಹೇಳಿದರು.
ಕೆ.ಎಚ್. ದೊಡ್ಡಮನಿ ಮಾತನಾಡಿ, ಇಂದಿನ ಡಿಜಿಟಲ್ ಕಾಲದಲ್ಲಿಯೂ ಶಂಕರಗೌಡ ಪಾಟೀಲರ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಬೀಳಗಿಯ ಸನಾದಿ ಅಪ್ಪಣ್ಣ ವಂಶಸ್ಥರಾದ ನಾಲ್ಕನೇ ತಲೆಮಾರಿನ ಶಹನಾಯಿ ವಾದಕ ಬಸವರಾಜ ಭಜಂತ್ರಿ, ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಂಗೀತ ಕಲಾವಿದರು, ರಂಗಭೂಮಿ ಕಲಾವಿದರು, ಪಂ. ಪಂಚಾಕ್ಷರ ಗವಾಯಿಗಳವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.