ವಿಜಯಸಾಕ್ಷಿ ಸುದ್ದಿ, ಗದಗ: ನೇರವಾದ ಬರವಣಿಗೆಯ ಮೂಲಕ ಮೂಡಿಬಂದ ಲೇಖನಗಳ ಮೂಲಕ ಹೋರಾಟದ ಹಾದಿಗೆ ಸಾಹಿತ್ಯ ಕ್ಷೇತ್ರದಲ್ಲಿ ಶಾಂತರಸ ಅವರದ್ದು ದೊಡ್ಡ ಹೆಜ್ಜೆ. ಅವರಿಗೂ ಗದಗಿಗೂ ವಿಶೇಷ ನಂಟಿದೆ ಎಂದು ಸಾಹಿತಿಗಳಾದ ಎ.ಎಸ್. ಮಕಾನದಾರ ಹೇಳಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಮತ್ತು ಗದಗ ಸಂಸ ಥಿಯೇಟರ್, ನಿರಂತರ ಪ್ರಕಾಶನ ಗದಗ, ಐ.ಕ್ಯೂ.ಎ.ಸಿ ಹಾಗೂ ಕನ್ನಡ ವಿಭಾಗದ ವತಿಯಿಂದ ಶಾಂತರಸ-100 ಶತಮಾನೋತ್ಸವ ಆಚರಣೆಯಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಹಿಂದಿನವರನ್ನು ನಾವು ನೆನಪಿಸಿಕೊಳ್ಳಬೇಕು. ಕೃತಜ್ಞತಾ ಭಾವದಿಂದ ಅವರಿಗೆ ಗೌರವವನ್ನು ಸಲ್ಲಿಸಬೇಕು. ಇದು ನಮ್ಮ ಕರ್ತವ್ಯವೂ ಹೌದು. ಆ ಊರು-ಈ ಊರು, ಯಾವ ಊರಾದರೇನು, ನಮ್ಮ ಊರೇ ನಮಗೆ ಚೆಂದ. ನಮ್ಮೆಲ್ಲರ ಕನಸಿನಲ್ಲಿ ಬರುವುದು ಸಹ ನಮ್ಮದೇ ಊರು, ನಮ್ಮದೇ ಭಾಷೆ. ಹೀಗೆ ಶಾಂತರಸರಿಗೂ ಗದಗ ನಗರದ ಜನತೆಯೊಂದಿಗೆ ವಿಶೇಷ ನಂಟಿದೆ ಎಂದು ಹೇಳಿದರು.
ಪ್ರಾಂಶುಪಾಲ ಪ್ರೊ. ಎಂ.ಯು. ಹಿರೇಮಠ ಮಾತನಾಡಿ, ಶಾಂತರಸರ ಪರಿಣಾಮಕಾರಿ ಕತೆ, ಗಜಲ್ಗಳು ಮಹತ್ವಪೂರ್ಣವಾದವು. ಸಂಸ ಥಿಯೇಟರ್ ತಂಡ ರಾಜ್ಯದ 31 ಜಿಲ್ಲೆಗಳಲ್ಲೂ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಪಲ್ಲವಿ ಹಾಗೂ ಕಾಜಲ್ ಶಾಂತರಸರು ಬರೆದ ಗಜಲ್ಗಳ ವಾಚನ ಮಾಡಿದರು. ಪ್ರೊ. ಎಸ್.ಯು. ಸಜ್ಜನಶೆಟ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಐ.ಕ್ಯೂ.ಎ.ಸಿ. ಸಂಚಾಲಕ ಪ್ರೊ. ಆರೀಫ್ ಎಸ್, ಪ್ರೊ. ರೀಯಾಜಅಹ್ಮದ ದೊಡ್ಡಮನಿ, ಪ್ರೊ. ಸತೀಶ ಸರ್ವಿ ಭಾಗವಹಿಸಿದ್ದರು. ಡಾ. ಸುಜಾತಾ ಬರದೂರ ಕಾರ್ಯಕ್ರಮ ನಿರೂಪಿಸಿದರು.