ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟಿ ರಮ್ಯಾ ರೈ ಬಂಧನಕ್ಕೆ ಒಳಗಾಗಿದ್ದಾರೆ. ದುಬೈನಿಂದ 14 ಕೆಜಿ ಚಿನ್ನವನ್ನು ಅಕ್ರಮವಾಗಿ ತರುವಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದಿದ್ದು ನಟಿಯನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆಯ ಕುರಿತು ರನ್ಯಾ ರಾವ್ ಮಲತಂದೆ ರಾಮಚಂದ್ರ ರಾವ್ ಪ್ರತಿಕ್ರಿಯಿಸಿದ್ದು ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
ನಟಿ ರನ್ಯಾ ರಾವ್ ಐಪಿಎಸ್ ಅಧಿಕಾರಿ, ಡಿಜಿಪಿ ರಾಮಚಂದ್ರ ರಾವ್ ಅವರ ಮಲ ಮಗಳು. ರಾಮಚಂದ್ರ ರಾವ್ 2ನೇ ಮದುವೆ ಆಗಿದ್ದಾರೆ. ರನ್ಯಾ ಅವರ ತಾಯಿಗೂ ರಾಮಚಂದ್ರ ಅವರೊಂದಿಗೆ ಎರಡನೇ ಮದುವೆ. ರಾಮಚಂದ್ರ ರಾವ್ ಪತ್ನಿಯ ಮೊದಲ ಪತಿಯಿಂದ ಹುಟ್ಟಿದವರೇ ರನ್ಯಾ. ಘಟನೆಯ ಕುರಿತು ರಾಮಚಂದ್ರ ರಾವ್ ಪತ್ರ ಒಂದನ್ನು ಬರೆದಿದ್ದಾರೆ.
‘ಈ ಘಟನೆಯಿಂದ ಪೋಷಕನಾಗಿ ನನ್ನ ಹೃದಯ ಒಡೆದು ಹೋಗಿದೆ. ನನಗೆ ಆಗಿರುವ ಅಘಾತವನ್ನು ಹೇಳಲು ಪದಗಳೇ ಇಲ್ಲ. ಇತ್ತಿಚಿನ ಬೆಳವಣಿಗೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಇದು ತುಂಬಾ ಕಷ್ಟದ ಸಮಯ. ಇದನ್ನ ಎದುರಿಸಲು ನಾವು ಕಷ್ಟ ಪಡುತ್ತಿದ್ದೇವೆ. ರನ್ಯಾ ಹಾಗೂ ಜತಿನ್ ಹುಕ್ಕೇರಿ 2024ರಲ್ಲಿ ಮದುವೆ ಆದರು. ಮದುವೆ ಆದ ನಂತರ ಅವರು ತಮ್ಮ ಖಾಸಗಿತನ ಮತ್ತು ಸ್ವಾತ್ರಂತ್ರ್ಯವನ್ನ ಕಾಪಾಡಿಕೊಂಡಿದ್ದಾರೆ. ನಮ್ಮ ಮನೆಗೆ ಬರುವುದನ್ನು ಆಕೆ ನಿಲ್ಲಿಸಿದ್ದಾಳೆ. ನಾವು ಭೇಟಿಯಾಗಲು ಅವಕಾಶ ನೀಡಿಲ್ಲ’ ಎಂದು ಪತ್ರದಲ್ಲಿ ಬರೆದಿದ್ದಾರೆ.
ಮುಂದುವರೆದು ‘ನಮ್ಮ ಹಾಗೂ ಅವರ ನಡುವೆ ಅಂತರ ಬೆಳೆಯಿತು. ನಾನು ಕೆಲಸದಲ್ಲಿ ಪ್ರಾಮಾಣಿಕನಾಗಿದ್ದೇನೆ. ನನ್ನದೆ ಆದ ಶಿಸ್ತಿನ ಜೀವನ ನಡೆಸಿದ್ದೇನೆ. ನಮ್ಮ ಕುಟುಂಬದ ಭವಿಷ್ಯಕ್ಕೆ ಕಳಂಕ ಬಂದಿದೆ. ನಾನು ದುಃಖಿತ ತಂದೆ ಆಗಿದ್ದೇನೆ. ನನ್ನ ಜೀವನದಲ್ಲಿ ಊಹೆಗೂ ನಿಲುಕದ ಘಟನೆ ನಡೆಯುತ್ತೆ ಎಂದುಕೊಂಡಿರಲಿಲ್ಲ. ರನ್ಯಾ ವಿಚಾರದಲ್ಲಿ ನಾನು ಕಾನೂನು ಉಲ್ಲಂಘಿಸಿದ್ರೆ ಕಾನೂನು ಕ್ರಮ ಕೈಗೊಳ್ಳಲಿ’ ಎಂದು ಅವರು ಬರೆದಿದ್ದಾರೆ.