ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಹೊರವಲಯದಲ್ಲಿ ಮಂಗಳವಾರ ನಡೆದ ಗುತ್ತಿಗೆದಾರ ಶಿವಾನಂದ ಕುನ್ನೂರ ಅವರ ಬರ್ಬರ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಮೇಲೆ ಇಂದು ಬೆಳ್ಳಂ ಬೆಳಗ್ಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಕೊಲೆ ಆರೋಪಿಗಳಾದ ಅಶ್ರಫ್ ಮತ್ತು ನಾಗರಾಜ ಸವದತ್ತಿ ಮೇಲೆ ಪೊಲೀಸರು ಹಾನಗಲ್ಲಿನಲ್ಲಿ ಫೈರಿಂಗ್ ಮಾಡಿದ್ದಾರೆ. ಗುತ್ತಿಗೆದಾರ ಶಿವಾನಂದ ಕುನ್ನೂರ ಅವರ ಕೊಲೆ ಪ್ರಕರಣ ರಾಜ್ಯಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಬಂಧಿಸಿ ಕರೆ ತರುತ್ತಿದ್ದ ಸಂದರ್ಭದಲ್ಲಿ ಕೊಂಡೋಜಿ ಬಳಿ ಪೊಲೀಸರ ಮೇಲೆ ಆರೋಪಿಗಳು ದಾಳಿ ಮಾಡಿದ್ದಾರೆ.
ಈ ವೇಳೆ ಆತ್ಮರಕ್ಷಣೆಗಾಗಿ ಕೊಲೆ ಆರೋಪಿಗಳ ಮೇಲೆ ಹಾನಗಲ್ ಪಿ ಎಸ್ ಐ ಸಂಪತ್ ಕುಮಾರ್ ಅವರು ಫೈರಿಂಗ್ ಮಾಡಿ ಬಂಧಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಹೇಳಿದ್ದೇನು?
ಆಸ್ತಿ ವಿವಾದದಿಂದಾಗಿ ಜೂನ್ 24 ರಂದು ಶಿಗ್ಗಾವಿ ಪಟ್ಟಣದಲ್ಲಿ ಗುತ್ತಿಗೆದಾರ ಶಿವಾನಂದ ಎಂಬುವವರನ್ನು ನಾಗರಾಜ್ ಅಂಡ್ ಟೀಮ್ ಹತ್ಯೆ ಮಾಡಿತ್ತು. ಘಟನೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳನ್ನು ಒಳಗೊಂಡ 4 ಪ್ರತ್ಯೇಕ ತಂಡ ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿತ್ತು.
ಬೇರೆ ರಾಜ್ಯಗಳಲ್ಲಿ ಆರೋಪಿಗಳಿರೋ ಬಗ್ಗೆ ಮಾಹಿತಿ ಪಡೆದ ಪೊಲೀಸರು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುದೀಪ್, ಸುರೇಶ್, ಹನಮಂತ, ನಾಗರಾಜ್ ಮತ್ತು ಆಶ್ರಪ್ ಬಂಧಿತರು. ಅದರಲ್ಲಿ ನಾಗರಾಜ್ ಮತ್ತು ಆಶ್ರಪ್ ಇಬ್ಬರೂ ಕೊಂಡೋಜಿ ಬಳಿ ಬಂಧನವಾಗಿದ್ರು. ಈ ವೇಳೆ ಶಿಗ್ಗಾವಿ ಟೌನ್ ಸಿಪಿಐ ಸತ್ಯಪ್ಪ & ಹಾನಗಲ್ ಪಿ ಎಸ್ ಐ ಸಂಪತ್ ಮೇಲೆ ಹಲ್ಲೆಗೆ ಯತ್ನಿಸಿದ್ರು. ಹೀಗಾಗಿ ಜೀವ ರಕ್ಷಣೆಗಾಗಿ ಇಬ್ಬರ ಮೇಲೂ ಪೊಲೀಸರು ಪೈರಿಂಗ್ ಮಾಡಿದ್ದಾರೆ.
ಗಾಯಾಳುಗಳು ಪೊಲೀಸ್ ಸಿಬ್ಬಂದಿ ಸೇರಿ ಆರೋಪಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಟ್ಟಾರೆ 5 ಜನ ಆರೋಪಿಗಳು ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಎಂದು ಅಂಶುಕುಮಾರ್ ಮಾಹಿತಿ ನೀಡಿದ್ದಾರೆ.
ಘಟನೆ ವಿವರ:
ಮಂಗಳವಾರ ಹಾಡಹಗಲೇ ಪ್ರಥಮ ದರ್ಜೆ ಗುತ್ತಿಗೆದಾರನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಶಿಗ್ಗಾಂವ್ ಪಟ್ಟಣದ ಹೊರವಲಯದ ಗಂಗಿಭಾವಿ ಕ್ರಾಸ್ ಬಳಿ ನಡೆದಿತ್ತು. 40 ವರ್ಷದ ಶಿವಾನಂದ ಕುನ್ನೂರು ಕೊಲೆಗೀಡಾದ ಗುತ್ತಿಗೆದಾರ.
ಆರೋಪಿಗಳು ಶಿವಾನಂದನ ಮೇಲೆ ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಹಲ್ಲೆಗೈದು ಕೊಲೆ ಮಾಡಿದ್ದರು. ಈ ಕೃತ್ಯವು ಕೆಲವರ ಫೋನ್ನಲ್ಲಿ ರೆಕಾರ್ಡ್ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.