ಗದಗ:- ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಕಾರು ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಮೂಡಿವೆ.
ಈ ಬಗ್ಗೆ ಮೃತರ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆಗೆ ಒತ್ತಾಯ ಮಾಡಿದ್ದಾರೆ. ಘಟನೆ ಸಂಬಂಧ ಕುಟುಂಬಸ್ಥರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನೇಣು ಬಿಗಿದುಕೊಂಡು ಸುನಿಲ್ ಆತ್ಮಹತ್ಯೆ ಮಾಡಿಕೊಂಡ ಅಂತ ಹೇಳಲಾಗುತ್ತಿದೆ. ಆದರೆ ಸಂಬಂಧಿಕರು ಬರುವ ಮುನ್ನವೇ ಬಾಡಿ ಕೆಳಗಿಳಿಸಲಾಗಿದೆ. ಹೀಗಾಗಿ ಪೊಲೀಸರ ತನಿಖಾ ವಿಧಾನದ ಮೇಲೆ ಅನುಮಾನ ಮೂಡುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಸುನೀಲ್ ಆತ್ಮಹತ್ಯೆಗೆ ಶಾಸಕರ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದಿರುವ ಸಂಬಂಧಿಕರು, ಮೂರು ವರ್ಷದಿಂದ ಶಾಸಕರ ಜೊತೆ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಹಣದ ವ್ಯವಹಾರ ಏನೂ ಇರಲಿಲ್ಲ. ಆದರೆ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ!? ಘಟನೆ ಬಗ್ಗೆ ತನಿಖೆ ನಡೆಸಿ ಪೊಲೀಸರು ಕಾರಣ ಪತ್ತೆ ಹಚ್ಚಲಿ ಎಂದು ಮೃತನ ಸಂಬಂಧಿಕರು ಆಗ್ರಹಿಸಿದ್ದಾರೆ.
ಘಟನೆ ಬಗ್ಗೆ ಮೃತನ ಸಹೋದರ ಆನಂದ್ ಮಾತನಾಡಿ, ನಿನ್ನೆ ರಾತ್ರಿ 8.30 ರ ತನಕ ಆತನ ಜೊತೆಯಲ್ಲೇ ಇದ್ದು, ಬಳಿಕ ಮನೆಗೆ ಹೋದೆ. ಆಮೇಲೆ ರಾತ್ರಿ ಕೂಡ ಫೋನ್ ನಲ್ಲಿ ಸುನೀಲ್ ಮಾತನಾಡಿದ್ದಾನೆ. ಆದರೆ ದಿಢೀರ್ ಅಂತ ಯಾಕೆ ಈ ನಿರ್ಧಾರ ತೆಗೆದುಕೊಂಡಿದ್ದಾನೆ ಗೊತ್ತಿಲ್ಲ. ಸಾವಿನ ಬಗ್ಗೆ ಅನುಮಾನ ಇಲ್ಲ ಆದರೆ ತನಿಖೆ ಆಗಬೇಕು ಎಂದಿದ್ದಾರೆ.
ಆತ ನಮ್ಮ ಸಂಬಂಧಿಕ:
ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಈ ಕುರಿತು ಲಕ್ಷ್ಮೇಶ್ವರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೂರು ವರ್ಷದಿಂದ ಮೃತ ಸುನೀಲ್ ನಮ್ಮ ಜೊತೆಗೆ ಇದ್ದ. ಡ್ರೈವರ್ ಅನ್ನೋದಕ್ಕಿಂತ ಸುನಿಲ್ ನಮ್ಮ ಸಂಬಂಧಿ. ನಮ್ಮ ಕುಟುಂಬದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ.
ಆತ ಸೂಸೈಡ್ ಮಾಡಿಕೊಂಡ ಬಗ್ಗೆ ಬೆಳಗ್ಗೆ 10 :30 ಗಂಟೆ ಬಳಿಕ ನನಗೆ ಮಾಹಿತಿ ಸಿಕ್ತು. ಬೆಳಗ್ಗೆ ಮನೆ ಹತ್ತಿರ ಹೋಗಿ ನೋಡಿದಾಗ ವಿಷಯ ಗೊತ್ತಾಯ್ತು. ಅವರಿಗೆ ಅಂತಹ ದುಷ್ಮನ್ ಗಳು ಯಾರು ಇಲ್ಲ. ಸಧ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೊಬೈಲ್ ವಶಕ್ಕೆ ಪಡೆದು ಇನ್ವೆಸ್ಟಿಗೇಷನ್ ನಡೀತಿದೆ ಎಂದರು.
ಇನ್ವೆಷ್ಟಿಗೇಷನ್ ಪ್ರೊಸೀಜರ್ ಲ್ಯಾಪ್ಸ್ ಆಗಿಲ್ಲ. ನಾನೂ ಪೊಲೀಸರಿಗೆ ಯಾವುದೇ ಸೂಚನೆ ಕೊಟ್ಟಿಲ್ಲ.. ನಿನ್ನೆ ಅಣ್ಣ-ತಮ್ಮ ಇಬ್ಬರೇ ಮಾತ್ನಾಡಿದ್ದಾರೆ ಅಂತಿದ್ದಾರೆ. ಏನಿದೆ ಅಂತಾ ಸ್ಪಷ್ಟವಾಗಿ ಗೊತ್ತಿಲ್ಲ. ಅವನಿಗೆ ಬಯ್ಯೋದಕ್ಕೆ ಯಾರೂ ಹೋಗಿಲ್ಲ. ನನ್ನ ಪತ್ನಿಗೆ ಸಹೋದರನಾಗಬೇಕು. ಅವನು ಟ್ರಕ್ ಡ್ರೈವರ್ ಆಗಿದ್ದ ಪತ್ನಿ ಸರೋಜಾ ಅವರೇ ಆತನನ್ನ ಡ್ರೈವರ್ ಆಗಿ ಕರೆದುಕೊಂಡು ಬಂದಿದ್ದು, ಎಂಎಲ್ ಎ ಆಗುವದಕ್ಕಿಂತ ಮೊದಲಿನಿಂದಲೂ ನಮ್ಮ ಜೊತೆ ಇದ್ದಾನೆ.
ಮನೆ ಕಟ್ಟಿಸಿಕೊಳ್ಳಬೇಕೆಂದಿದ್ದ ಆ ಬಗ್ಗೆ ಪಿಡಿಓ ಅವರಿಗೂ ಹೇಳಿದ್ದೆ. ಅವರ ತಂದೆ-ತಾಯಿಗೆ ದುಡ್ಡು ಕೊಡ್ತಾ ಇರ್ತಿದ್ವಿ. ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದುರ ಬಗ್ಗೆ ತನಿಖೆ ಮೂಲಕ ಗೊತ್ತಾಗಲಿ ಎಂದು ಶಾಸಕ ಚಂದ್ರು ಲಮಾಣಿ ಹೇಳಿದ್ದಾರೆ. ಒಟ್ಟಿನಲ್ಲಿ ಸುನೀಲ್ ಆತ್ಮಹತ್ಯೆ ಪ್ರಕರಣದ ಸತ್ಯಾಂಶ ಪೊಲೀಸರ ನಿಷ್ಪಕ್ಷಪಾತ ತನಿಖೆಯಿಂದಲೇ ಹೊರಬರಬೇಕಿದೆ.
ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.