ಕಾರವಾರ: ಶಿರೂರು ಭೂಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಕೇರಳದ ಕೋಳಿವಾಡ ಮೂಲದ ಟ್ಯಾಂಕರ್ ಚಾಲಕ ಅರ್ಜುನ್ ಶವ ಪತ್ತೆಯಾಗಿದೆ. ಲಾರಿಯೊಳಗೆ ಅರ್ಜುನನ ಮೃತದೇಹ ಎರಡು ತುಂಡಾಗಿ ಪತ್ತೆಯಾಗಿದೆ. ಗಂಗಾವಳಿ ನದಿಯಿಂದ ಲಾರಿ ಹಾಗೂ ಸಿಕ್ಕಿರುವ ಮೃತದೇಹವನ್ನು ಎತ್ತುವ ಕಾರ್ಯ ಮುಂದುವರೆದಿದೆ.
ಕಳೆದ 72 ದಿನಗಳ ನಂತರ ನದಿಯಲ್ಲಿ ಲಾರಿ ಹಾಗೂ ಇಬ್ಬರ ಮೃತದೇಹಗಳು ಪತ್ತೆಯಾಗಿದೆ. ಗುಡ್ಡ ಕುಸಿತದ ರಭಸಕ್ಕೆ ನದಿಗೆ ಬಿದ್ದು ಲಾರಿ ನಜ್ಜುಗುಜ್ಜಾಗಿದೆ.ಸದ್ಯ ಲಾರಿಯನ್ನು ಬಾರ್ಜ್ನಲ್ಲಿರುವ ಕ್ರೇನ್ ಮೂಲಕ ಮೇಲಕ್ಕೆ ಎತ್ತಿದ್ದು ಲಾರಿ ಮುಂಭಾಗ ಹಾಗೂ ಚಾಲಕನ ಮೃತದೇಹ ಗೋಚರವಾಗಿದೆ.
ಜುಲೈ 16 ರಂದು ಅರ್ಜುನ್ ನಾಪತ್ತೆಯಾಗಿದ್ದರು. ಆ ದಿನ ಬೆಳಿಗ್ಗೆ 8.45 ಕ್ಕೆ ಶಿರೂರಿನಲ್ಲಿ ಭೂಕುಸಿತ ಸಂಭವಿಸಿತ್ತು. ಜುಲೈ 23 ರಂದು ರಾಡಾರ್ ಮತ್ತು ಸೋನಾರ್ ಸಿಗ್ನಲ್ಗಳಲ್ಲಿ ಲಾರಿ ಎಂದು ಶಂಕಿಸಲಾದ ಲೋಹದ ಭಾಗದ ಸಿಗ್ನಲ್ಗಳು ದೊರೆತಿದ್ದವು. ನದಿಯ ಮಧ್ಯದಲ್ಲಿ ಮಣ್ಣಿನ ದಿಬ್ಬದ ಬಳಿ CP 4 ಎಂದು ಗುರುತಿಸಲಾಗಿತ್ತು. ಜುಲೈ 28 ರಂದು ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು.