ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ‘ಭಾರತ್ ಗೌರವ್’ ರೈಲು ಸಂಚಾರವನ್ನು ಮೊತ್ತಮೊದಲಿಗೆ ಆರಂಭಿಸಿದ ‘ಸೌತ್ ಸ್ಟಾರ್ ರೈಲು’ ಕಂಪನಿಯು ನವ ಬೃಂದಾವನ ಹಾಗೂ ಶ್ರೀಶೈಲ ಸೇರಿದಂತೆ 8 ಧರ್ಮಕ್ಷೇತ್ರಗಳಿಗೆ ‘ಶಿವಸಾಯಿ ಯಾತ್ರೆ’ ಹೊಸ ಪ್ರವಾಸ ಕಾರ್ಯಕ್ರಮ ರೂಪಿಸಿದ್ದು, ಅಕ್ಟೋಬರ್ 2ರಿಂದ ಈ ರೈಲು ಸಂಚಾರ ಆರಂಭಿಸಲಿದೆ.
ಪ್ರವಾಸಿಗರು ರೈಲಿನಲ್ಲಿ ತೆರಳಿ ನವ ಬೃಂದಾವನ, ಮಂತ್ರಾಲಯ, ಫಂಡರಿಪುರ, ಶಿರಡಿ, ತ್ರಯಂಬಕೇಶ್ವರ, ಭೀಮಾಶಂಕರ, ಗುಷ್ನೇಶ್ವರ ಹಾಗೂ ಶ್ರೀಶೈಲಂ ಧರ್ಮಕ್ಷೇತ್ರಗಳ ದರ್ಶನ ಮಾಡಬಹುದು. ಒಟ್ಟು 11 ದಿನಗಳ ಈ ಪ್ರವಾಸವು ಎಲ್ಲೋರಾ ಗುಹೆಗಳ ಭೇಟಿಯನ್ನೂ ಒಳಗೊಂಡಿದೆ.
ರೈಲು ಬಂಗಾರಪೇಟೆಯಿಂದ ಹೊರಡಲಿದ್ದು, ಪ್ರವಾಸಿಗರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಬೆಂಗಳೂರಿನ ವೈಟ್ ಫೀಲ್ಡ್, ಯಲಹಂಕ, ಧರ್ಮಾವರಂ, ಅನಂತಪುರ, ಬಳ್ಳಾರಿ, ಹೊಸಪೇಟೆಯಲ್ಲೂ ರೈಲು ಹತ್ತಬಹುದು. ಆನ್ಬೋರ್ಡ್ ಘೋಷಣಾ ವ್ಯವಸ್ಥೆ, ನಿಯೋಜಿತ ಕೋಚ್ ಭದ್ರತಾ ಸಿಬ್ಬಂದಿ, ಟೂರ್ ಮ್ಯಾನೇಜರ್ಗಳು, ಪ್ರಯಾಣ ವಿಮೆ, ಹೋಟೆಲ್ ವ್ಯವಸ್ಥೆ, ಅನಿಯಮಿತ ದಕ್ಷಿಣ ಭಾರತದ ಊಟ ಇತ್ಯಾದಿ ಸೌಲಭ್ಯಗಳನ್ನು ಇದು ಒಳಗೊಂಡಿರುತ್ತದೆ. ಈ ಪ್ರವಾಸಕ್ಕೆ ಭಾರತೀಯ ರೈಲ್ವೆಯ ಶೇ. 33ರಷ್ಟು ಸಹಾಯಧನ ಲಭ್ಯವಾಗಲಿದೆ. ದೇಶದ ಮುಂಚೂಣಿ ಪ್ರವಾಸಿರೈಲು ನಿರ್ವಾಹಕ ಸಂಸ್ಥೆಯಾದ ಟೂರ್ ಟೈಮ್ಸ್ ಸಹಭಾಗಿತ್ವದಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದು ‘ಸೌತ್ ಸ್ಟಾರ್’ನ ಪ್ರಾಡಕ್ಟ್ ಡೈರೆಕ್ಟರ್ ವಿಘ್ನೇಶ್ ಜಿ. ತಿಳಿಸಿದ್ದಾರೆ.