ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ವಡೆಯರ ಮಲ್ಲಾಪೂರ ಗ್ರಾಮದಲ್ಲಿ ಬುಧವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಸರ್ವ ಧರ್ಮದವರು ಸೇರಿ ಆಚರಿಸಿದರು. ವಿವಿಧ ಸಮಾಜ ಬಾಂಧವರು ಇರುವ ಈ ಗ್ರಾಮದಲ್ಲಿ ಶಿವಾಜಿ ಎಲ್ಲ ಧರ್ಮಕ್ಕೆ ಸೇರಿದವರು ಎನ್ನುವ ನಿಟ್ಟಿನಲ್ಲಿ ಜ್ಯಾತ್ಯಾತೀತತೆಯ ದೃಷ್ಟಿಯಿಂದ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಿದ್ದು ಎಲ್ಲರ ಗಮನ ಸೆಳೆಯುವಂತಿತ್ತು.
ಇದೇ ಸಂದರ್ಭದಲ್ಲಿ ಶ್ರೀ ಛತ್ರಪತಿ ಶಿವಾಜಿ ಕ್ಷತ್ರಿಯ ಮರಾಠಾ ಸಮಾಜ ಸಂಘದ ಶಿವಾಜಿ ಸಮುದಾಯ ಭವನ ಉದ್ಘಾಟನೆಯನ್ನು ನೆರವೇರಿಸಿದ ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ಓರ್ವ ಧೀಮಂತ ಯೋಧರಾಗಿದ್ದರು. ಪಶ್ಚಿಮ ಭಾಗದಲ್ಲಿ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿದವರೂ ಇವರೇ. ಪ್ರತೀ ವರ್ಷ ಫೆಬ್ರವರಿ 19ನ್ನು ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಅಂತಹ ಮಹಾನ್ ದೇಶಭಕ್ತ, ಅಪ್ರತಿಮ ಶೂರ ಶಿವಾಜಿ ಮಹಾರಾಜರ ಜಯಂತಿಯನ್ನು ಇಂತಹ ಸಣ್ಣ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಸಿರುವದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಹತ್ತಿಮತ್ತೂರ ವಿರಕ್ತಮಠದ ಶ್ರೀ ನಿಜಗುಣ ಶಿವಯೋಗಿಗಳು ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಮಂಜುನಾಥ ಡಂಬಳ ವಹಿಸಿದ್ದರು. ಶಂಕರ ಮರಾಠೆ, ಶರಣಬಸವ ಹವಾಲ್ದಾರ, ಅಣ್ಣಪ್ಪ ರಾಮಗಿರಿ, ಪದ್ಮರಾಜ ಪಾಟೀಲ, ಹೊನ್ನಪ್ಪ ಪಶುಪತಿಹಾಳ, ನಾಗರತ್ನ ಕಡಾರಿ, ರಾಮಣ್ಣ ಡಂಬಳ, ಎಂ.ಎಸ್. ಪಾಟೀಲ, ವೆಂಕಪ್ಪ ಬಡಿಗೇರ, ಈಶ್ವರ ಗದಗ, ಈಶ್ವರ ಲೋಂಡೆ, ಮಂಜುನಾಥ ಡಂಬಳ, ಪ್ರಭಾಕರ ಜಾಧವ, ಎಂ.ಎಸ್. ಡಂಬಳ, ವೆಂಕಟೇಶ ಬಡಿಗೇರ, ಬಸವರಾಜ ಡಂಬಳ, ಪರಮೇಶ್ವರ ಡಂಬಳ, ಮಹೇಶ ಡಂಬಳ, ವೀರಪ್ಪ ಬಡಿಗೇರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ವಕೀಲ ಮಹೇಶ ಹಾರೋಗೇರಿ ಉಪನ್ಯಾಸ ನೀಡಿದರು.
ಇದಕ್ಕೂ ಮೊದಲು ಮುಂಜಾನೆ 8 ಗಂಟೆಗೆ ಪೂರ್ಣಕುಂಭ ಹಾಗೂ ಸಕಲ ವಾಧ್ಯವೈಭವಗಳೊಂದಿಗೆ ಶಿವಾಜಿ ಮಹಾರಾಜರ ಬೃಹತ್ ಮೂರ್ತಿಯ ಮೆರವಣಿಗೆಯು ಗ್ರಾಮದ ಪ್ರಮುಖ ಭಾಗಗಳಲ್ಲಿ ಸಂಚರಿಸಿತು. ಪಿ.ಪಿ. ಗಾಯಕವಾಡ ದ್ವಜಪೂಜೆ ನೆರವೇರಿಸಿದರು.