ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಮದುವೆಯಾದ ಕೇವಲ ಆರು ದಿನಗಳಲ್ಲೇ ವರನ ಜೀವನದಲ್ಲಿ ಅಚ್ಚರಿ ತಿರುವು ಕಂಡ ಘಟನೆ ಬೆಳಕಿಗೆ ಬಂದಿದೆ. ಮದುವೆಗೆ ಮುನ್ನ ನೀಡಿದ ಮಾಹಿತಿ ಸುಳ್ಳು ಎಂದು ಆರೋಪಿಸಿ ವರ ರವಿ ಜವಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ತುಮ್ಮಿನಕಟ್ಟಿ ಗ್ರಾಮದ ನಿವಾಸಿ ರವಿ ಜವಳಿ ಅವರು ಫೆಬ್ರವರಿ 06ರಂದು ಹೀರೆಕೆರೂರಿನ ದುರ್ಗಾದೇವಿ ದೇವಸ್ಥಾನದಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಗಿರಿಯಾಪುರ ಗ್ರಾಮದ ರೇಖಾ ಕೆ ಅವರೊಂದಿಗೆ ಮದುವೆಯಾಗಿದ್ದರು. ದಂಜನ್ ನಾಯಕ್ ಹಾಗೂ ಶಾರದಮ್ಮ ಎಂಬವರು ಬ್ರೋಕರ್ಗಳಾಗಿ ಮಧ್ಯವರ್ತಿತ್ವ ವಹಿಸಿದ್ದರೆಂದು ತಿಳಿದುಬಂದಿದೆ.
ಮದುವೆಗೂ ಮುನ್ನ ರೇಖಾ ತಮ್ಮ ಬಳಿ ಇರುವ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದೇನೆ ಎಂದು ತಿಳಿಸಿದ್ದಾಳೆ ಎಂದು ವರದಿಯಾಗಿದೆ. ಆದರೆ ಮದುವೆಯ ನಂತರ, ಆ ಇಬ್ಬರು ಮಕ್ಕಳು ರೇಖಾ ಅವರ ಹಿಂದಿನ ಮದುವೆಯಿಂದ ಜನಿಸಿದ್ದವರು ಎಂಬ ವಿಚಾರ ರವಿಗೆ ತಿಳಿದು ಬಂದಿದೆ ಎಂದು ಆರೋಪಿಸಲಾಗಿದೆ.
ಈ ಬೆಳವಣಿಗೆ ರವಿಗೆ ತೀವ್ರ ಆಘಾತ ತಂದಿದ್ದು, ತನ್ನನ್ನು ಉದ್ದೇಶಪೂರ್ವಕವಾಗಿ ವಂಚಿಸಲಾಗಿದೆ ಎಂದು ಆರೋಪಿಸಿ ರೇಖಾ ಹಾಗೂ ಮಧ್ಯವರ್ತಿಗಳ ವಿರುದ್ಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಹಲಗೇರಿ ಪೊಲೀಸರು ವಿಚಾರಣೆ ಆರಂಭಿಸಿದ್ದು, ಮದುವೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಮಾಹಿತಿ ಪರಿಶೀಲನೆ ನಡೆಸುತ್ತಿದ್ದಾರೆ. ಮದುವೆ ಸಂಬಂಧಗಳಲ್ಲಿ ಪಾರದರ್ಶಕತೆ ಮತ್ತು ಪೂರ್ವ ಪರಿಶೀಲನೆಯ ಅಗತ್ಯತೆ ಈ ಘಟನೆ ಮತ್ತೊಮ್ಮೆ ಹೀಗೇ ಸದ್ದು ಮಾಡಿಸಿದೆ.



