ಕಾರವಾರ:- ಹೆಚ್ಚುತ್ತಿರುವ ಅನಕ್ಷರತೆ, ಕುಟುಂಬ ಸದಸ್ಯರ ಒತ್ತಡ, ಏಕಪೋಷಕತ್ವ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ಗಂಡು ಸಂತಾನ ಬೇಕೆಂಬ ಹೆಬ್ಬಯಕೆ, ಪ್ರೇಮ ಪ್ರಕರಣ ಇತರೆ ಕಾರಣಗಳಿಂದ ರಾಜ್ಯದಲ್ಲಿ ಬಾಲ ಗರ್ಭಿಣಿ ಪ್ರಕರಣಗಳು ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ.
ಅದರಂತೆ ಉತ್ತರ ಕನ್ನಡ ಜಿಲ್ಲೆಯ ಆಘಾತಕಾರಿ ಸುದ್ದಿ ಒಂದು ಹೊರ ಬಿದ್ದಿದ್ದು, ಕಳೆದ ಮೂರು ವರ್ಷದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳವಾಗಿದೆ.
ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ಪ್ರೇಮ ಪ್ರಕರಣಗಳು ಅಪ್ರಾಪ್ತ ಗರ್ಭಿಣಿಯರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಈ ಬಗ್ಗೆ ಬಾಲಕಿಯರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಮಕ್ಕಳ ಹಕ್ಕು ರಕ್ಷಣಾ ಸಮಿತಿ ಶ್ರಮಿಸುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಜಾಗೃತಿ, ಆಪ್ತ ಸಮಾಲೋಚನೆ, ಪೊಲೀಸರ ಮೂಲಕ ಅರಿವು ಸೇರಿ ಅನೇಕ ಬಗೆಯ ಕಾರ್ಯಾಗಾರಗಳು ನಡೆಯುತ್ತಿವೆ. ಅದಾಗಿಯೂ, ಹದಿಹರೆಯದ ಮನಸ್ಸುಗಳಲ್ಲಿನ ಚಂಚಲತೆ ಪ್ರೀತಿ-ಪ್ರೇಮ ವಿಷಯವಾಗಿ ಹೆಚ್ಚು ಆಸಕ್ತಿಹೊಂದಿದ್ದು, ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ.
ಪಾಲಕರು ನೀಡಿದ ದೂರು, ಅಂಗನವಾಡಿ ಕಾರ್ಯಕರ್ತೆಯರು ನೀಡಿದ ಮಾಹಿತಿ ಹಾಗೂ ಇನ್ನಿತರ ಆಧಾರದಲ್ಲಿ ಬಾಲ ಗರ್ಭಿಣಿಯರ ಪ್ರಕರಣವನ್ನು ಮಕ್ಕಳ ರಕ್ಷಣಾ ಘಟಕ ಪತ್ತೆ ಮಾಡುತ್ತಿದೆ. ಉತ್ತರ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕಳೆದ ಮೂರು ವರ್ಷದ ಅವಧಿಯಲ್ಲಿ 55 ಬಾಲ ಗರ್ಭಿಣಿಯರನ್ನು ಪತ್ತೆ ಮಾಡಿದ್ದಾರೆ. ಮಕ್ಕಳ ರಕ್ಷಣಾ ಘಟಕಕ್ಕೆ ಜಿಲ್ಲಾಕೇಂದ್ರ ಕಾರವಾರದಲ್ಲಿ ಮುಖ್ಯ ಕಚೇರಿಯಿದ್ದು, ಇಲ್ಲಿಯೇ ಹೆಚ್ಚಿನ ಪ್ರಕರಣಗಳು ವರದಿಯಾಗಿದೆ.


