ಬೆಂಗಳೂರು: ಮೀಸಲಾತಿ ಹಾಗೂ ಎಲ್ಲಾ ಸೌಲಭ್ಯಗಳು ಕೇವಲ ಸಿಕ್ಕವರಿಗೇ ಸಿಗಬಾರದು. ಇದನ್ನು ಎಲ್ಲರಿಗೂ ದೊರೆಯುವಂತೆ ಮಾಡಲು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಹಳ ಪ್ರಮುಖ ಪಾತ್ರವಹಿಸುತ್ತದೆ” ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಅವರು ಹೇಳಿದರು. ಸದಾಶಿವನಗರದ ನಿವಾಸದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಜಾತಿ ಸಮೀಕ್ಷೆ ಗೊಂದಲದಿಂದ ಕೂಡಿದೆ ಎನ್ನುವ ಆರೋಪಗಳ ಬಗ್ಗೆ ಕೇಳಿದಾಗ, “ನಾವು ಗಮನಿಸುತ್ತಿರುವುದು ಸೌಲಭ್ಯ ಇಲ್ಲದವರ ಸ್ಥಿತಿಗತಿಯನ್ನು ಮಾತ್ರ. ಇವುಗಳನ್ನು ಸಂಗ್ರಹಿಸಿ ಅವರನ್ನು ಮೇಲಕ್ಕೆತ್ತಲು ಯಾವ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತರಬೇಕು ಎಂಬುದಾಗಿ ಆಲೋಚನೆ ಮಾಡಲಾಗುತ್ತದೆ.
ಸಮೀಕ್ಷೆಯಿಂದ ಎಲ್ಲರಿಗೂ ಒಳ್ಳೆಯದಾಗಲಿದೆ. ಗ್ರಾಮೀಣ ಹಾಗೂ ನಗರ ಭಾಗದ ಜನರು ಇದರಲ್ಲಿ ಭಾಗವಹಿಸಿ ಮಾಹಿತಿ ನೀಡಬೇಕು. ಸಮೀಕ್ಷೆಯಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ಗೊಂದಲ ಮಾಡುತ್ತಿದ್ದಾರೆ. ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾತ್ರ” ಎಂದು ಸ್ಪಷ್ಟಪಡಿಸಿದರು.
ಸಮೀಕ್ಷೆಯಲ್ಲಿ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಆಯೋಗ ಹೇಳಿರುವ ಬಗ್ಗೆ ಕೇಳಿದಾಗ, “ಆಯೋಗ ಕೇಳಿರುವ ಎಲ್ಲಾ ಮಾಹಿತಿಗಳಿಗೆ ಉತ್ತರಿಸಬೇಕು ಎನ್ನುವುದು ಕಡ್ಡಾಯವಲ್ಲ. ಒಟ್ಟು 60 ಪ್ರಶ್ನೆಗಳನ್ನು ಕೇಳಲಾಗಿದೆ. ಅದರಲ್ಲಿ ಸಮಂಜಸವಲ್ಲದ ಪ್ರಶ್ನೆಗಳಿಗೆ ಉತ್ತರಿಸಬಹುದು, ಇರದೆಯೂ ಇರಬಹುದು ಎಂದು ಹೇಳಲಾಗಿದೆ. ಎಂದರು.
ಸಂಬಳ, ಒಡವೆಗಳ ಮಾಹಿತಿ ಬಗ್ಗೆ ಕೇಳಲಾಗಿದೆ ಎಂದಾಗ, “ಬಡವರೋ ಅಥವಾ ಬಲ್ಲಿದರೋ ಎಂದು ತಿಳಿಯಲು ಈ ರೀತಿ ಮಾಡಲಾಗಿದೆ. ಚಿನ್ನ ಎಂಬುದು ಬಡವರಿಗೆ ಕನಸಿನ ಮಾತು. ಚಿನ್ನ ಇಟ್ಟಿರುವವರು ಇದರ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಹೊರತು. ಇಲ್ಲದವರು ಸುಮ್ಮನೆ ಇದ್ದಾರೆ.” ಎಂದರು.



