ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೇವರು ಇದ್ದಾನೆ ಎಂಬುದು ಪ್ರತಿಯೊಬ್ಬ ಮನುಷ್ಯನ ನಂಬಿಕೆ. ಈ ನಿಟ್ಟಿನಲ್ಲಿ ದೇವತಾ ಸ್ವರೂಪಿ, ಕರುಣಾಮಯಿ ಶ್ರೀ ಸಾಯಿಬಾಬಾ ಅವರು ಭಕ್ತರ ಬಲವಾದ ನಂಬಿಕೆ ಮತ್ತು ಜೀವನದ ಸ್ಪೂರ್ತಿಯಾಗಿದ್ದಾರೆ ಎಂದು ಗಣ್ಯ ವರ್ತಕ, ಸಾಯಿಬಾಬಾ ಭಕ್ತರಾದ ಗಂಗಾಧರ ಪುರಾಣಿಕಮಠ ಹೇಳಿದರು.
ಅವರು ಲಕ್ಷ್ಮೇಶ್ವರ ಸಮೀಪದ ಅಡರಕಟ್ಟಿ ಗ್ರಾಮದ ಈಶ್ವರ ನಗರದಲ್ಲಿ ನಿರ್ಮಾಣಗೊಂಡ ಸಾಯಿಬಾಬಾ ಮಂದಿರದ ಉದ್ಘಾಟನೆ ನಿಮಿತ್ತ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ದೇವರೊಬ್ಬ ನಾಮ ಹಲವು. ಎಲ್ಲ ಧರ್ಮಗಳ ಸಾರ ಒಂದೇ, ಅದು ಮಾನವೀಯತೆ. ಇದನ್ನೇ ಸಾರಿದ ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಅವರು ಭಕ್ತರ ನಂಬಿಕೆಯ ದ್ಯೋತಕವಾಗಿದ್ದಾರೆ. ಭಕ್ತಿ, ಜ್ಞಾನ, ಯೋಗ ಮತ್ತು ಆತ್ಮಸಾಕ್ಷಾತ್ಕಾರವನ್ನು ಅರುಹಿದ ಸಾಯಿಬಾಬಾ ಎಲ್ಲ ಜಾತಿ, ಧರ್ಮ ಮೀರಿದ ಸಂತರು. ಅವರು ತೋರಿದ ಆದರ್ಶ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಮಾಡುವ ದಾನ, ಧರ್ಮ, ಪುಣ್ಯ ಕಾರ್ಯಗಳಲ್ಲಿ ನಿಷ್ಕಲ್ಮಶ, ನಿಸ್ವಾರ್ಥವಿದ್ದರೆ ದೇವರು ಅದಕ್ಕೆ ಶ್ರೇಷ್ಠವಾದ ಫಲ ನೀಡುತ್ತಾನೆ ಎಂದರು.
ಭಕ್ತರ ಸಹಾಯ-ಸಹಕಾರದಿಂದಲೇ ನಿರ್ಮಾಣಗೊಂಡ ಸಾಯಿಬಾಬಾ ದೇವಸ್ಥಾನದ ಲೋಕಾರ್ಪಣೆ ನಿಮಿತ್ತ ನವಗ್ರಹ ಶಾಂತಿ, ಅಭಿಷೇಕ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಹೋಮ-ಹವನ, ಪೂಜೆ, ಪ್ರಾರ್ಥನೆ, ಪ್ರಸಾದ ನೆರವೇರಿತು.