ಬೆಂಗಳೂರು: ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಮಾಡಿರುವ ಬಿ.ಆರ್.ಪಾಟೀಲರ ಬಾಯಿ ಮುಚ್ಚಿಸೋ ಕೆಲಸ ಸಿದ್ದರಾಮಯ್ಯ ಮಾಡಬಹುದು ಎಂದು ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
Advertisement
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಒಬ್ಬೊಬ್ಬರಾಗಿಯೇ ಮುಂದಿನ ದಿನಗಳಲ್ಲಿ ಬಾಯಿ ಬಿಡುತ್ತಾರೆ. ಬಿ.ಆರ್.ಪಾಟೀಲ್ ಅವರು ಮನೆಗಳನ್ನು ಕೊಡುವ ಸಮಯದಲ್ಲಿ ದುಡ್ಡು ಕೊಡದೇ, ಲಂಚ ಕೊಡದೇ ಏನು ಕೆಲಸ ಆಗುವುದಿಲ್ಲ ಎಂದು ಗುರುತರದ ಆರೋಪ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಕರೆದರೆ ವಾಸ್ತವದ ಸ್ಥಿತಿ ಹೇಳುವುದಾಗಿ ಹೇಳಿದ್ದಾರೆ. ಸಿಎಂ ಅವರೇ ಬಿ.ಆರ್.ಪಾಟೀಲ್ ಅವರ ಬಾಯಿ ಮುಚ್ಚಿಸುವ ಆತಂಕ ನಮಗಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಕೇವಲ ರಾಜು ಕಾಗೆ ಮಾತ್ರವಲ್ಲ, ಹೀಗೆ ಹತ್ತಾರು ಜನರು ಈ ರೀತಿ ಹೇಳುತ್ತಿದ್ದಾರೆ. ಒಬ್ಬೊಬ್ಬರೇ ಬಾಯಿ ಬಿಡುತ್ತಾರೆ. ನೀವೇ ಕಾದು ನೋಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.