ಕೊಪ್ಪಳ:- ಕರ್ನಾಟಕದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ ಸಿಎಂ ಪಟ್ಟಿಯಲ್ಲಿ ಸಿದ್ದರಾಮಯ್ಯ ಮೊದಲಿಗರು ಎಂದು ಜನಾರ್ದನ್ ರೆಡ್ಡಿ ಲೇವಡಿ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ರಾಜ್ಯದಲ್ಲಿ ಅತಿಹೆಚ್ಚು ಭ್ರಷ್ಟಾಚಾರ ಮಾಡಿದ ಮುಖ್ಯಮಂತ್ರಿಗಳು ಅಂದರೆ ಸಿದ್ದರಾಮಯ್ಯನವರು, ಭ್ರಷ್ಟಾಚಾರದಿಂದ ಸಾಕಷ್ಟು ಬೇನಾಮಿ ಆಸ್ತಿಯನ್ನು ಮಾಡಿಕೊಂಡಿದ್ದಾರೆ ಎಂದರು.
ರಾಜ್ಯದಲ್ಲಿನ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಸಿದ್ದರಾಮಯ್ಯನವರು ಅತಿಹೆಚ್ಚು ಭ್ರಷ್ಟಾಚಾರ ಮಾಡಿದ ಸಿಎಂ ಆಗಿದ್ದಾರೆ. ರಾಜ್ಯದಲ್ಲಿ ಮುಡಾ ಹಗರಣದಲ್ಲಿ ಕೇವಲ 140 ಸೈಟ್ಗಳು ಮಾತ್ರವಲ್ಲದೆ ಸಾವಿರಕ್ಕೂ ಅಧಿಕ ಸೈಟ್ಗಳನ್ನು ಬೇನಾಮಿ ಆಸ್ತಿಯಾಗಿ ಮಾಡಿಕೊಂಡಿದ್ದಾರೆ. ಮುಡಾದಲ್ಲಿ ಸೈಟ್ ಖರೀದಿ ಮಾಡಿರುವವರನ್ನು ವಿಚಾರಣೆ ಮಾಡಿದರೆ ಸತ್ಯಾಂಶ ಹೊರಬರಲಿದೆ. ಜನರಲ್ಲಿ ಹಿಂದುಳಿದ ನಾಯಕ ಎಂದು ನಂಬಿಕೆಯನ್ನು ಹುಟ್ಟಿಸಿಕೊಂಡು ಮಾಡಿರುವ ಭ್ರಷ್ಟಾಚಾರ ಮುಡಾ ಹಗರಣದಿಂದ ಹೊರ ಬಂದಿದೆ ಎಂದು ಕಿಡಿಕಾರಿದರು.
ಮುಡಾ ಹಗರಣ ರಾಜ್ಯದಲ್ಲಿಯೇ ಇದೊಂದು ದೊಡ್ಡ ಸ್ಕ್ಯಾಮ್ ಆಗಿದೆ. ಇದಷ್ಟೇ ಅಲ್ಲದೆ ಮೈಸೂರಿನ ಸಾಕಷ್ಟು ಲೇಔಟ್ಗಳ ತನಿಖೆಯನ್ನು ನಡೆಸಬೇಕು. ಇದು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ಇದ್ದರೂ ಕೂಡ ಕ್ರಮಕ್ಕೆ ಮುಂದಾಗದೆ ಸುಮ್ಮನೆ ಇದ್ದಾರೆ. ಹೈಕಮಾಂಡ್ ಯಾಕೆ ಕ್ರಮಕ್ಕೆ ಮುಂದಾಗದೆ ಸುಮ್ಮನಿದೆ ಎನ್ನುವುದು ಗೊತ್ತಿಲ್ಲ. ಆದರೆ ರಾಜ್ಯದ ಜನರಿಗೆ ಸಿದ್ದರಾಮಯ್ಯ ಮಾಡಿರುವ ಮುಡಾ ಹಗರಣದಲ್ಲಿನ ಸತ್ಯಾಂಶ ದಿನ ದಿನೇ ಗೊತ್ತಾಗುತ್ತಿದೆ. ಇಡಿಯವರು ತನಿಖೆಯನ್ನು ನಡೆಸುತ್ತಿದ್ದು, ತನಿಖೆಯಿಂದ ಸತ್ಯಾಂಶ ಹೊರ ಬೀಳಲಿದೆ ಎಂದರು.