ಗದಗ:- ಯಾಕೋ ಏನೋ ಸಿಎಂ ಸಿದ್ದರಾಮಯ್ಯ ಅವರ ಬಹುನಿರೀಕ್ಷಿತ ಜಾತಿ ಗಣತಿಗೆ ಒಂದಲ್ಲಾ ಒಂದು ವಿರೋಧ ವ್ಯಕ್ತವಾಗುತ್ತಲೇ ಇದೆ. ಹಿಂದೆ ಮತ್ತು ಈಗಲೂ, ಸಿದ್ದರಾಮಯ್ಯನವರ ಸರ್ಕಾರದ ಆಯಕಟ್ಟಿನಲ್ಲಿರುವ ಸಚಿವರ ವಿರೋಧವೇ ಮತ್ತೆ ಇದು ಮುಂದೂಡಲು ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಜಾತಿ ಗಣತಿ ಸಮೀಕ್ಷೆ ಆರಂಭದಲ್ಲಿಯೇ ವಿಘ್ನಯೊಂದು ಎದುರಾಗಿದೆ. ಕಿಟ್ ಪಡೆಯಲು ಬಂದ ಶಿಕ್ಷಕರಿಗೆ ಭಾರೀ ನಿರಾಸೆ ಆಗಿದೆ. ತಹಸೀಲ್ದಾರ್ ಕಚೇರಿ ಬಂದ್ ಆಗಿರುವ ಕಾರಣ, ತಹಸೀಲ್ದಾರ್ ಕಚೇರಿ ಮುಂದೆ ಕಿಟ್ ಗಾಗಿ ಶಿಕ್ಷಕರು ಕಾಯುತ್ತಿದ್ದಾರೆ. ಆದರೆ ಕಿಟ್ ವಿತರಣಾ ಸಿಬ್ಬಂದಿ ಕಚೇರಿಗೆ ಬೀಗ ಹಾಕಿ ಮನೆಯಲ್ಲಿ ಮಜಾ ಮಾಡುತ್ತಿದ್ದಾರೆ.
ಕಿಟ್ ಇನ್ನೂ ಬಂದಿಲ್ಲ ಅಂತ ಶಿಕ್ಷಕರನ್ನ ಸಿಬ್ಬಂದಿ ಮರಳಿ ಕಳಿಸಿದ್ದಾರೆ. ನಿನ್ನೆ ತರಬೇತಿಯಲ್ಲಿ ಕಿಟ್ ವಿತರಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ಗದಗ ತಹಸೀಲ್ದಾರ್ ಕಚೇರಿಗೆ ಬಂದ್ರೆ ಕಚೇರಿಗೆ ಬೀಗ ಹಾಕಲಾಗಿದೆ. ಹೀಗಾಗಿ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಶಿಕ್ಷಕರು ಮರಳಿ ಹೋಗಿದ್ದಾರೆ.
ಮತ್ತೆ ನಾಳೆ ಸಮೀಕ್ಷೆ ಮಾಡುವ ಬದಲು ಕಿಟ್ ಪಡೆಯಲು ಬರಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ನಾಳೆ ಕಿಟ್ ಪಡೆಯಬೇಕಾ ಇಲ್ಲ ಸಮೀಕ್ಷೆ ಮಾಡಬೇಕಾ ಎಂಬ ಗೊಂದಲದಲ್ಲಿ ಶಿಕ್ಷಕರು ಇದ್ದಾರೆ. ಆದರೆ ಇನ್ನೂ ಕಿಟ್ ಬಂದಿಲ್ಲ ಅಂತ ಸಿಬ್ಬಂದಿ ಹಾರಿಕೆ ಉತ್ತರ ನೀಡುತ್ತಿದ್ದಾರೆ.