ಬೆಂಗಳೂರು:– ಬಡವರ ಪಾಲಿನ ಅಕ್ಷಯ ಪಾತ್ರೆ ಅಂತಲೇ ಕರೆಸಿಕೊಳ್ಳುತ್ತಿದ್ದ ಇಂದಿರಾ ಕ್ಯಾಂಟೀನ್ಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಅವನತಿಯ ಹಾದಿ ಹಿಡಿದಿರೋದು ಸಿಎಂ ಸಿದ್ದರಾಮಯ್ಯರಿಗೆ ಮುಜುಗರ ತರಿಸಿದೆ.
ಅದರಲ್ಲೂ ನಗರದ ಪ್ರಮುಖ ಆಸ್ಪತ್ರೆಗಳ ಆವರಣ, ಅಕ್ಕಪಕ್ಕದಲ್ಲಿರುವ ಕ್ಯಾಂಟೀನ್ಗಳೇ ಮುಚ್ಚಿದ್ದು, ನಿಜವಾಗಿ ಯಾರಿಗೆ ಯೋಜನೆ ತಲುಪಬೇಕಿತ್ತೋ ಅವರೇ ಯೋಜನೆ ಸಿಗದೇ ಪರದಾಡುವಂತಾಗಿದೆ.
ಕಳೆದ ಒಂದು ವರ್ಷದಿಂದ ಬಾಕಿ ಹಣ ಪಾವತಿ ಮಾಡಿಲ್ಲ ಎಂದು ಆಹಾರ ಪೂರೈಕೆಯ ಟೆಂಡರ್ ಪಡೆದಿದ್ದ ಶೆಫ್ ಟಾಕ್ ಸಂಸ್ಥೆ ಆಹಾರ ಪೂರೈಸುತ್ತಿಲ್ಲ. ಇದರಿಂದ ಪಾಲಿಕೆಯ (BBMP) ದಕ್ಷಿಣ ವಲಯಕ್ಕೆ ಬರುವ 11ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್ಗಳು ಕಳೆದ 15-20 ದಿನಗಳಿಂದ ಬಾಗಿಲು ಬಂದ್ ಮಾಡಿವೆ.
ಇತ್ತ ಬಿಬಿಎಂಪಿ ವ್ಯಾಪ್ತಿಯಲ್ಲಿ 174 ಸ್ಥಿರ ಹಾಗೂ 24 ಮೊಬೈಲ್ ಕ್ಯಾಂಟೀನ್ಗಳಿವೆ. ಶುರುವಾದಾಗಿನಿಂದ ಪ್ರತಿ ನಿತ್ಯ ಮೂರೂವರೆ ಲಕ್ಷ ಜನ ಊಟ, ತಿಂಡಿ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಕಂಪನಿಗೆ ಪಾಲಿಕೆ 40 ಕೋಟಿ ಹಣ ನೀಡಬೇಕಿದೆ. ಕ್ಯಾಂಟೀನ್ ಸಿಬ್ಬಂದಿ ಸಂಬಳ, ದಿನಸಿ ಬಿಲ್ ಸಮಸ್ಯೆಯಿಂದಾಗಿ ಟೆಂಡರ್ ಪಡೆದ ಸಂಸ್ಥೆ ಕ್ಯಾಂಟೀನ್ಗೆ ಬೀಗ ಹಾಕಿದೆ.
ಬಸವನಗುಡಿ, ಪದ್ಮನಾಭನಗರ, ಚಿಕ್ಕಪೇಟೆ, ಜಯನಗರ ಕ್ಷೇತ್ರಗಳಲ್ಲಿ ಕ್ಯಾಂಟೀನ್ಗಳಿಗೆ ಬೀಗ ಹಾಕಲಾಗಿದೆ. ಇತ್ತ ಬಿಬಿಎಂಪಿಯ ಅಧಿಕಾರಿಗಳನ್ನ ಕೇಳಿದ್ರೆ ಎಲ್ಲವನ್ನೂ ಸರಿಪಡಿಸ್ತೀವೆ ಅಂತಾ ಸಬೂಬು ನೀಡ್ತಿದ್ದಾರೆ.
ಸದ್ಯ ಇಂದಿರಾ ಕ್ಯಾಂಟೀನ್ ಬಂದ್ ಆಗಿರೋದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ. ಬಿಜೆಪಿ ಅವಧಿಯಲ್ಲಿ ಕ್ಯಾಂಟೀನ್ ಮುಚ್ಚಿದ್ದಾರೆ ಅಂತಿದ್ರೀ, ಈಗ ನಿಮ್ಮದೇ ಸರ್ಕಾರ ಇದ್ರೂ ಯಾಕೆ ಬಂದ್ ಆಗಿದೆ ಅಂತಾ ಪ್ರಶ್ನಿಸಿದ್ದಾರೆ.
ಇತ್ತ ಇಂದಿರಾ ಕ್ಯಾಂಟೀನ್ ಬಂದ್ ಆಗಿರೋ ಬಗ್ಗೆ ಸ್ಪಷ್ಟನೆ ಕೊಟ್ಟಿರೋ ಪಾಲಿಕೆ ಎಲ್ಲವನ್ನೂ ಸರಿಪಡಿಸಿ ಪುನಾರಂಭ ಮಾಡ್ತೀವೆ ಅಂತಾ ಪ್ರಕಟಣೆ ಹೊರಡಿಸಿದೆ. ಒಟ್ಟಿನಲ್ಲಿ ಬಡವರ ಹೊಟ್ಟೆ ತುಂಬಿಸಬೇಕಿದ್ದ ಇಂದಿರಾ ಕ್ಯಾಂಟೀನ್ ಲಾಕ್ ಆಗಿದ್ದು, ಸರ್ಕಾರ ಹಾಗೂ ಪಾಲಿಕೆಯ ನಿರ್ಲಕ್ಷ್ಯವನ್ನ ಅನಾವರಣ ಮಾಡಿದೆ.