ವಿಜಯಸಾಕ್ಷಿ ಸುದ್ದಿ, ಗದಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹಲವು ಕಾರ್ಯಕ್ರಮಗಳ ಮೂಲಕ ಗ್ರಾಮಸ್ಥರಲ್ಲಿ ಮಹತ್ತರ ಬದಲಾವಣೆ ತಂದಿದೆ. ಈ ಯೋಜನೆಯನ್ನು ಗ್ರಾಮೀಣರಿಗೆ ತಲುಪಿಸುತ್ತಿರುವ ಹೊರಗುತ್ತಿಗೆ ನೌಕರರ ಕಾರ್ಯ ಮೆಚ್ಚುಗೆಗೂ ಪಾತ್ರವಾಗಿದೆ ಎಂದು ಜಿ.ಪಂ ಮಾಜಿ ಅಧ್ಯಕ್ಷರಾದ ಮತ್ತು ಜಿಲ್ಲಾ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಸಿದ್ಧಲಿಂಗೇಶ್ವರ ಪಾಟೀಲ ಹೇಳಿದರು.
ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಗದಗ ಜಿಲ್ಲಾ ನರೇಗಾ ನೌಕರರ ಕ್ಷೇಮಾಭಿವೃದ್ಧಿ (ನೇವಾಕ್) ಸಂಘದ ಪದಾಧಿಕಾರಿ ಸಭೆ ಹಾಗೂ ಗೌರವಾಧಕ್ಷರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಲವು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಚಿವ ಎಚ್.ಕೆ. ಪಾಟೀಲರು ಆರ್ಡಿಪಿಆರ್ ಸಚಿವರಾಗಿದ್ದಾಗ ಹೊರ ಗುತ್ತಿಗೆಯಡಿ ನಾನಾ ಹಂತದ ಹುದ್ದೆಗಳನ್ನು ಸೃಜಿಸಿ ಯೋಜನೆ ಅನುಷ್ಠಾನದಲ್ಲಿ ಯಾವುದೇ ತೊಂದರೆಯಾಗದಂತೆ ಮಾಡಿದ್ದಾರೆ. ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯೂ ಸಹ ಉತ್ತಮ ಕಾರ್ಯವೈಖರಿಯ ಮೂಲಕ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನರೇಗಾ ಹೊರಗುತ್ತಿಗೆ ನೌಕರರ ಸಂಘ ರಚಿಸಿ, ನನ್ನನು ಸಂಘದ ಎಲ್ಲ ಸದಸ್ಯರು ಒಮ್ಮತದಿಂದ ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಸಂತಸದ ವಿಚಾರವಾಗಿದೆ. ನಮ್ಮ ಕೆಲಸದ ಮೂಲಕ ರಾಜ್ಯದಲ್ಲಿಯೇ ಮಾದರಿ ಜಿಲ್ಲಾ ಸಂಘ ಎಂದು ಗುರುತಿಸುವಂತೆ ಮಾಡೋಣ ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಸಿದ್ದು ಗುಡಿಮನಿ, ರಾಜ್ಯ ಸಂಘದ ಜಿಲ್ಲಾ ಪ್ರತಿನಿಧಿ ಕಿರಣಕುಮಾರ ಎಸ್.ಎಚ್., ಜಿಲ್ಲಾ ಸಂಘದ ಸದಸ್ಯರಾದ ವೀರೇಶ ಪಟ್ಟಣಶೆಟ್ಟಿ, ಅರುಣ ತಂಬ್ರಳ್ಳಿ, ತಾಲೂಕು ಪ್ರತಿನಿಧಿಗಳಾದ ನವೀನ ಬಸರಿ, ಮೋಹನ ಹೊಂಬಳ, ಹನುಮಂತ ಡಂಬಳ, ಗುರು ಪಕ್ಕೀರಗೌಡ, ಪ್ರವೀಣ ಗಾಮನಗಟ್ಟಿ, ಮಹೇಶ ಚಿತ್ತವಾಡಗಿ ಇತರರಿದ್ದರು. ಮಾಧ್ಯಮ ಸಂಯೋಜಕ ವೀರೇಶ ಬಸನಗೌಡ್ರ ಕಾರ್ಯಕ್ರಮ ನಿರ್ವಹಿಸಿದರು.



