ವಿಜಯಸಾಕ್ಷಿ ಸುದ್ದಿ, ಗದಗ: ಸಮಸ್ತ ಮನುಕುಲಕ್ಕೆ ಉಪದೇಶ ಮಾಡುವ ಗ್ರಂಥ ಸಿದ್ಧಾಂತ ಶಿಖಾಮಣಿ. ಈ ಪವಿತ್ರ ಗ್ರಂಥವನ್ನು ವೀರಶೈವ ಧರ್ಮಗ್ರಂಥ ಎಂದು ಬಣ್ಣಿಸಲಾಗಿದ್ದರೂ ಅದು ವೀರಶೈವರಿಗೆ ಅಷ್ಟೇ ಸೀಮಿತವಾಗಿಲ್ಲ. ಜಗತ್ತಿನ ಎಲ್ಲ ಧರ್ಮಿಯರೂ ಅಧ್ಯಯನ ಮಾಡುವುದರಿಂದ ಇದನ್ನು ಜಾಗತಿಕ ಧರ್ಮಗ್ರಂಥ ಎನ್ನಲಾಗಿದೆ ಎಂದು ಜಂಗಮವಾಡಿಮಠ ವಾರಣಾಸಿ ಕಾಶೀ ಮಹಾಪೀಠದ ಶ್ರೀಮತ್ ಕಾಶೀ ಜ್ಞಾನಸಿಂಹಾಸನಾಧೀಶ್ವರ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.
ಅವರು ರವಿವಾರ ನಗರದ ಗಾಣಿಗ ಭವನದಲ್ಲಿ ಗದಗ-ಬೆಟಗೇರಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಶ್ರೀಮದ್ ಕಾಶೀ ನೂತನ ಜಗದ್ಗುರುಗಳವರ ಆಷಾಡ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಎಲ್ಲ ಸಿದ್ಧಾಂತಗಳಿಗಿಂತ ಈ ಗ್ರಂಥವು ಮೇಲಿನ ಸ್ತರದಲ್ಲಿ ಇರುವುದರಿಂದ ವೀರಶೈವ ಧರ್ಮದ ಪ್ರಮುಖ ಗ್ರಂಥವೆಂದು ಬಣ್ಣಿಸಲಾಗಿದೆ. ಹೀಗಾಗಿ, ಈ ಗ್ರಂಥವನ್ನು ಎಲ್ಲರೂ ಓದಬೇಕು, ತಿಳಿಯಬೇಕು. ಅದರಂತೆ ಧರ್ಮದ ಹಾದಿಯಲ್ಲಿ ಮುನ್ನಡೆದು ತಮ್ಮ ಜೀವನವನ್ನು ಪಾವನ ಮಾಡಿಕೊಳ್ಳಬೇಕೆಂದರು.
ನೇತೃತ್ವ ವಹಿಸಿದ್ದ ಯಲಬುರ್ಗಾದ ಧರಮುರಡಿ ಹಿರೇಮಠದ ಪೂಜ್ಯ ಬಸವಲಿಂಗ ಶಿವಾಚಾರ್ಯ ಸ್ವಾಮಿಗಳು ಸಂದರ್ಭೋಚಿತವಾಗಿ ಮಾತನಾಡಿದರು. ನರೇಗಲ್ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಶ್ರೀ ಸಿದ್ಧಾಂತ ಶಿಖಾಮಣಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಫಂಡರಪುರದ ಸುಭಾಸ ಸಿದ್ಧರಾಮ ಮಮಾನೆ ಅವರಿಗೆ ‘ಧರ್ಮಪ್ರಕಾಶ’ ಪ್ರಶಸ್ತಿಯನ್ನು ಹಾಗೂ ಉಡನಕಲ್ನ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕ ವೀರಭದ್ರಪ್ಪ ಹಿರೇಬೆನಕಲ್ ಅವರಿಗೆ ‘ದಿವ್ಯಾಂಗ ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ಭಕ್ತಿಸೇವೆ ವಹಿಸಿಕೊಂಡಿದ್ದ ಪಂಚಾಕ್ಷರಯ್ಯ ಹಿರೇಮಠ, ಲಿಂಗರಾಜ ಶಿಗ್ಲಿಮಠ, ಎಸ್.ಎಸ್. ಮೇಟಿ, ಮರಿಸ್ವಾಮಿ ಹಿರೇಮಠ, ಅನ್ನಪೂರ್ಣ ಗಡಾದ, ಶಾಂತಾ ಹಿರೇಮಠ, ಶಾಂತೇಶ ಅರಮನಿ ದಂಪತಿಗಳನ್ನು ಪೂಜ್ಯರು ಆಶೀರ್ವದಿಸಿದರು ವ್ಹಿ.ಸಿ. ಧನ್ನೂರಹಿರೇಮಠ, ಕೆ.ವ್ಹಿ. ಪಾಟೀಲ, ಉಮೇಶ ಭೂಸ್ತ, ಗುರುಸಿದ್ಧಯ್ಯ ಹಿರೇಮಠ ವೇದಿಕೆಯ ಮೇಲಿದ್ದರು.
ಕಸ್ತೂರಿಬಾಯಿ ಕಮ್ಮಾರ ಅವರಿಂದ ಸಂಗೀತ ಜರುಗಿತು. ಸುರೇಶ ಅಬ್ಬಿಗೇರಿ ಸ್ವಾಗತಿಸಿದರು. ನಿತ್ಯಂ ಯೋಗ ಕೇಂದ್ರದ ಮಹಿಳೆಯರಿಂದ ನೃತ್ಯ ದರ್ಶನ ಜರುಗಿತು. ವ್ಹಿ.ಕೆ. ಗುರುಮಠ ನಿರೂಪಿಸಿ ವಂದಿಸಿದರು.
ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಪೂಜ್ಯ ಒಪ್ಪತ್ತೇಶ್ವರ ಮಹಾಸ್ವಾಮಿಗಳು ಮಾತನಾಡಿ, ಎಲ್ಲರೂ ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಯಬೇಕು. ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಪಾಲಿಸುವ ಮೂಲಕ ಮಕ್ಕಳಿಗೂ ಇವುಗಳನ್ನು ರೂಢಿಸಬೇಕು. ಈ ಶರೀರಕ್ಕೆ ಸದ್ಗುಣಗಳ ಸಂಸ್ಕಾರ ನೀಡಿದಲ್ಲಿ ಮೋಕ್ಷ ಪ್ರಾಪ್ತಿಯಾಗಲು ಸಾಧ್ಯ ಎಂದರು.