ವಿಜಯಸಾಕ್ಷಿ ಸುದ್ದಿ, ಗದಗ: ನಗರದ ರೇವಣಸಿದ್ದೇಶ್ವರ ಕಾಟನ್ ಪ್ರೊಸೆಸಿಂಗ್ ಕೋ-ಆಪ್ ಸೊಸೈಟಿಯ ಕಾರ್ಯಾಲಯದಲ್ಲಿ ಸೆ. 20ರಂದು ಸಾಯಂಕಾಲ 4ಕ್ಕೆ ರೇವಣಸಿದ್ದೇಶ್ವರ ಸೊಸೈಟಿಯ ರಜತ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ರೇವಣಸಿದ್ದಪ್ಪ ಯಳಮಳಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇವಣಸಿದ್ದೇಶ್ವರ ಕಾಟನ್ ಪ್ರೊಸೆಸಿಂಗ್ ಸೊಸೈಟಿಯು 2001ರಲ್ಲಿ ಪ್ರಾರಂಭವಾಗಿದ್ದು, ಪ್ರಸ್ತುತ 149 ಸದಸ್ಯರನ್ನು ಹೊಂದಿದೆ. ಅಲ್ಲದೇ 14,90,000 ರೂ.ಗಳ ಶೇರು ಬಂಡವಾಳ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ 8 ಕೋಟಿ 99 ಲಕ್ಷ ಅಂದಾಜು ವಹಿವಾಟು ಮಾಡಿ ₹4,83,266 ನಿವ್ವಳ ಲಾಭ ಗಳಿಸಿದೆ. ಕಳೆದ 25 ವರ್ಷಗಳಿಂದ ಸಂಘವು ಪ್ರತಿವರ್ಷ ಡಿವಿಡೆಂಡ್ ಕೊಡುತ್ತಾ ಬಂದಿದ್ದು, ರಜತ ಮಹೋತ್ಸವದ ಅಂಗವಾಗಿ ಪ್ರಸಕ್ತ ಸಾಲಿನಿಂದ ಶೇ.25ರಷ್ಟು ಡಿವಿಡೆಂಡ್ ಕೊಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಹೀಗಾಗಿ ಸೊಸೈಟಿಯ ಆಡಿಟ್ ವರ್ಗೀಕರಣ ‘ಎ’ ಆಗಿದೆ ಎಂದರು.
ಮುಂಬರುವ ದಿನಗಳಲ್ಲಿ ರೇವಣಸಿದ್ದೇಶ್ವರ ಕಾಟನ್ ಪ್ರೊಸೆಸಿಂಗ್ ಕೋ-ಆಪ್ ಸೊಸೈಟಿ ಹಲವಾರು ಸಾಮಾಜಿಕ ಕೆಲಸವನ್ನು ಮಾಡಲಿದ್ದು, ಹಾಗೆ ಸೊಸೈಟಿಯನ್ನು ಬ್ಯಾಂಕ್ ಆಗಿ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಶೇರು ಬಂಡವಾಳ ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಸೊಸೈಟಿಯಿಂದ ಜನಪರವಾದ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಈ ವೇಳೆ ಸಂಘದ ಸದಸ್ಯ ಚನ್ನವೀರಪ್ಪ ದಿಂಡೂರು, ಚಂದ್ರು ಪತ್ತಾರ, ಉಮೇಶ ಹುಬ್ಬಳ್ಳಿ, ಈಶಣ್ಣ ಮುನವಳ್ಳಿ ಉಪಸ್ಥಿತರಿದ್ದರು.