ವಿಜಯಸಾಕ್ಷಿ ಸುದ್ದಿ, ಗದಗ: ಆಗಸ್ಟ್ 2 ಮತ್ತು 3ರಂದು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯ ರಜತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಎಂ.ಎನ್. ಕಾಮನಹಳ್ಳಿ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಗಸ್ಟ್ 2ರಂದು ಬೆಳಿಗ್ಗೆ 6ರಿಂದ 7ರವರೆಗೆ ರುದ್ರಾಭಿಷೇಕ, 7ರಿಂದ ರುದ್ರಹೋಮ, 11ರಿಂದ 1 ಗಂಟೆಗೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಮಧ್ಯಾಹ್ನ 3ರಿಂದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಸಾಯಂಕಾಲ 4ರಿಂದ ಮಹಿಳೆಯರಿಗೆ ಅಡುಗೆ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಎಂ.ಎನ್. ಕಾಮನಹಳ್ಳಿ ವಹಿಸಿಕೊಳ್ಳಲಿದ್ದು, ಅತಿಥಿಗಳಾಗಿ ನಗರಸಭೆ ಸದಸ್ಯೆಯರಾದ ಶ್ವೇತಾ ಬೆನಕನವಾರಿ, ವಿಜಯಲಕ್ಷ್ಮೀ, ನಿವೃತ್ತ ಚಿತ್ರಕಲಾ ಉಪನ್ಯಾಸಕಿ ಪ್ರೇಮಾ ಹಂದಿಗೋಳ ಆಗಮಿಸಲಿದ್ದಾರೆ. ಶಂಕರ ಹಾನಗಲ್ಲ, ಜಿ.ಜಿ. ಕುಲಕರ್ಣಿ, ಎಂ.ಬಿ. ಚನ್ನಪ್ಪಗೌಡರ, ಬಿ.ಎಚ್. ಗರಡಿಮನಿ, ವಿ.ಆರ್. ಕುಲಕರ್ಣಿ, ಕೆ.ಐ. ಕುರುಗೋಡ, ಆರ್.ಬಿ. ಒಡೆಯರ ಉಪಸ್ಥಿತರಿರುವರು. ಅದೇ ದಿನ ಸಾಯಂಕಾಲ 6.30ಕ್ಕೆ ಸ್ಥಳೀಯ ಕಲಾವಿದರಿಂದ `ಸಂಗೀತ ಸಂಜೆ’ ನಡೆಯಲಿದೆ ಎಂದು ತಿಳಿಸಿದರು.
ರಜತ ಮಹೋತ್ಸವ ಸಮಾರಂಭ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಆ. 3ರಂದು ನಡೆಯಲಿದ್ದು, ದಿವ್ಯ ಸಾನ್ನಿಧ್ಯವನ್ನು ಧಾರವಾಡ ಮುರಘಾಮಠದ ಪೂಜ್ಯ ಶ್ರೀ ಮ.ನಿ.ಪ್ರ. ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ನೆರವೇರಿಸಲಿದ್ದು, ವಿ.ಪ ಸದಸ್ಯ ಎಸ್.ವಿ. ಸಂಕನೂರಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಎಂ.ಎನ್. ಕಾಮನಹಳ್ಳಿ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸರಾದ ಡಾ. ಶಂಭು ಬಳಿಗಾರ ಆಗಮಿಸಲಿದ್ದು, ಅತಿಥಿ ಸ್ಥಾನವನ್ನು ಮಾಜಿ ಶಾಸಕ ಡಿ.ಆರ್. ಪಾಟೀಲ್ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂ.ಬಿ ಚೆನ್ನಪ್ಪಗೌಡ್ರ, ಕೆ.ಐ. ಕುರುಗೋಡ, ರಂಗಪ್ಪ ಒಡೆಯರ ಉಪಸ್ಥಿತರಿದ್ದರು.
ಮಧ್ಯಮ ವರ್ಗದವರಿಗೆ ಹಾಗೂ ಧಾರ್ಮಿಕ ಚಿಂತನೆಗಳಿಗೆ ಕಡಿಮೆ ದರದಲ್ಲಿ ಬಾಡಿಗೆ ನೀಡುತ್ತಾ ಸಮಾಜಮುಖಿ ಕಾರ್ಯಕ್ರಮಗಳನ್ನು ಸಮಿತಿಯಿಂದ ಮಾಡಿಕೊಂಡು ಬರಲಾಗಿದೆ. ಕಡಿಮೆ ದರದಲ್ಲಿ ಬಡವರಿಗೆ ಉಪಯುಕ್ತ ಕಾರ್ಯಕ್ರಮ ಮಾಡುತ್ತಿದ್ದೇವೆ. ಕರೋನಾ ಸಮಯದಲ್ಲಿ ಸಂಕ್ಷಿಪ್ತ ವಿವಾಹ ಕಾರ್ಯಕ್ರಮಗಳನ್ನು ಮಾಡಿದ್ದೇವೆ. 25 ವರ್ಷದಿಂದ ಸಾಂಸ್ಕೃತಿಕ ಸಮಿತಿ ವಿಶೇಷ ಸಾಧನೆ ಮಾಡಿಕೊಂಡು ಬಂದಿದೆ.
– ಬಿ.ಎಚ್. ಗರಡಿಮನಿ.
ಸಮಿತಿ ಸಲಹೆಗಾರರು.