ಬೆಂಗಳೂರು:- ಎಸ್.ಎಂ. ಕೃಷ್ಣ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಯಶ್ ಭಾವುಕರಾಗಿದ್ದಾರೆ.
ಇಂದು ಪತ್ನಿಯೊಂದಿಗೆ SM ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಯಶ್, ಎಸ್.ಎಂ. ಕೃಷ್ಣ ಅವರದ್ದು ಧೀಮಂತ ವ್ಯಕ್ತಿತ್ವವಾಗಿತ್ತು ಎಂದು ಸ್ಮರಿಸಿದ್ದಾರೆ.
ಪ್ರತಿಯೊಬ್ಬರು ಎಸ್.ಎಂ. ಕೃಷ್ಣರನ್ನು ನೆನಪಿಸಿಕೊಳ್ಳಲೇಬೇಕು. ಅವರು ರಾಜ್ಯಕ್ಕೆ ಕೊಟ್ಟಿರುವ ಕೊಡುಗೆ ಅಪಾರ. ಬೆಂಗಳೂರು ಆಗಿರಬಹುದು ಎಲ್ಲೇ ಆಗಿದ್ರೂ ಅವರು ಮಾಡಿರುವ ಕೆಲಸ ನಮ್ಮ ಮುಂದಿದೆ. ಅವರು ಎಷ್ಟು ಅದ್ಭುತವಾದ ಬದುಕನ್ನು ಬದುಕಿದ್ದಾರೆ ಎಂಬುದು ನಮಗೆಲ್ಲಾ ಗೊತ್ತು. ಅವರದ್ದು ಧೀಮಂತ ವ್ಯಕ್ತಿತ್ವವಾಗಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಯಶ್ ಮಾತನಾಡಿದರು.
ಅವರು ನಿಧನರಾದ ಸಂದರ್ಭದಲ್ಲಿ ನಾನು ಊರಲ್ಲಿ ಇರಲಿಲ್ಲ. ನಮ್ಮ ಪ್ರತಿ ಕೆಲಸಕ್ಕೂ ಎಸ್.ಎಂ. ಕೃಷ್ಣರವರ ಹಾರೈಕೆ ಇತ್ತು. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಯಶ್ ಹೇಳಿದ್ದಾರೆ.
ಇನ್ನೂ ಡಿ.11ರಂದು ಎಸ್.ಎಂ. ಕೃಷ್ಣ ನಿಧನರಾಗಿದ್ದ ದಿನದಂದು ಯಶ್ ಮುಂಬೈನಲ್ಲಿದ್ದರು. ‘ಟಾಕ್ಸಿಕ್’ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಈ ಕಾರಣಕ್ಕಾಗಿ ಎಸ್.ಎಂ ಕೃಷ್ಣರವರ ಅಂತಿಮ ದರ್ಶನ ಪಡೆಯಲು ಆಗಿರಲಿಲ್ಲ. ಹಾಗಾಗಿ ಇಂದು ಪತ್ನಿಯೊಂದಿಗೆ ಯಶ್ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮಾತನಾಡಿದ್ದಾರೆ.