ವಿಜಯಸಾಕ್ಷಿ ಸುದ್ದಿ, ಗದಗ: ಡಿಜಿಎಂ ಆಯುರ್ವೇದ ಮಹಾವಿದ್ಯಾಲಯದಲ್ಲಿ ಡಿ. 15ರಂದು ಬೆಳಿಗ್ಗೆ 10 ಗಂಟೆಗೆ ಹಳೆಯ ವಿದ್ಯಾರ್ಥಿಗಳಿಂದ ಜೀವನದ ಕಹಿ-ಮಧುರ ನೆನಪುಗಳನ್ನು ಮೆಲಕು ಹಾಕುವ 20ನೇ ಸಮಾವೇಶ`ಸ್ನೇಹ ಸಿಂಚನ-2024′ ಆಯೋಜಿಸಲಾಗಿದೆ ಎಂದು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ. ಐ.ಬಿ. ಕೊಟ್ಟೂರಶೆಟ್ಟರ್ ಹೇಳಿದರು.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದ ಸಾನ್ನಿಧ್ಯವನ್ನು ಜ.ಅಭಿನವ ಶಿವಾನಂದ ಸ್ವಾಮೀಜಿ ಹಾಗೂ ಸದಾಶಿವಾನಂದ ಸ್ವಾಮೀಜಿ ವಹಿಸಲಿದ್ದಾರೆ. ಜಾನಪದ ವಿದ್ವಾಂಸ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶಂಭು ಬಳಿಗಾರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಜ. ಶಿವಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಿ.ಎಸ್. ಪಾಟೀಲ, ನಿವೃತ್ತ ಪ್ರಾಚಾರ್ಯ ಡಾ. ಜಿ.ಬಿ. ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಮಹಾವಿದ್ಯಾಲಯದ 1999ನೇ ಸಾಲಿನ ವಿದ್ಯಾರ್ಥಿಗಳ ಬಳಗ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಹಳೆ ವಿದ್ಯಾರ್ಥಿಗಳ ಜೊತೆ ಹೊಸ ವಿದ್ಯಾರ್ಥಿಗಳ ಸಂಬಂಧವನ್ನು ಬೆಸೆಯುವ, ಸಾಧಕ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. 1999ನೇ ಸಾಲಿನ ವಿದ್ಯಾರ್ಥಿಗಳ ಬಳಗದಲ್ಲಿ ಅನೇಕ ಜನ ಪ್ರಾಧ್ಯಾಪಕರಾಗಿ, ಸರಕಾರಿ ವೈದ್ಯರಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ. ಆ ಎಲ್ಲ ಸಾಧಕರು ಒಗ್ಗೂಡುವ ಅಪರೂಪದ ಕಾರ್ಯಕ್ರಮವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ. ಉಮೇಶ ಪುರದ, ಡಾ. ಎಸ್.ಡಿ. ಯರಗೇರಿ, ಡಾ. ಬೂದೇಶ ಕಣಾಜ, ಡಾ. ಸಂತೋಷ ಬಳವಡಿ, ಡಾ. ಎಂ.ವಿ. ಸೊಬಗಿನ, ಡಾ. ಗಿರೀಶ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.