ವಿಜಯಸಾಕ್ಷಿ ಸುದ್ದಿ, ಗದಗ : ಸಮೀಪದ ತಿಮ್ಮಾಪೂರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2024-25ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಾಗೂ 15ನೇ ಹಣಕಾಸು ಯೋಜನೆಯಡಿ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯನ್ನು ಗ್ರಾಮದ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ನಡೆಯಿತು.
ಯೋಜನೆಗಳ ಬಗ್ಗೆ ತಾಲೂಕು ಕಾರ್ಯಕ್ರಮದ ವ್ಯವಸ್ಥಾಪಕ ಸಂತೋಷ ಪಾಟೀಲ್ ಮಾತನಾಡಿ ಈ ಯೋಜನೆ ನಡೆದುಬಂದ ದಾರಿಯನ್ನು ವಿವರಿಸಿದರು. ಕೂಲಿ ಕಾರ್ಮಿಕರಿಗೆ ಕೆಲಸದ ವೆಚ್ಚ 51,26,797 ರೂ, ಸಾಮಗ್ರಿ ವೆಚ್ಚ 14,92,222 ರೂ ಒಟ್ಟು ಅನುದಾನದಲ್ಲಿ 66,19,019 ರೂ ಬಳಕೆಯಾಗಿದ್ದು ಒಟ್ಟು 67 ಕಾಮಗಾರಿಗಳು ಅನುಷ್ಠಾನಗೊಂಡಿವೆ. ಅದರಲ್ಲಿ 26 ಕಾಮಗಾರಿಗಳ ಕೆಲಸ ಮಾಡದೆ ಇರುವ ಕಾರಣ 45774 ರೂಪಾಯಿ ಹಣವನ್ನು ಸರ್ಕಾರಕ್ಕೆ ವಾಪಸ್ ಭರಣೆ ಮಾಡಬೇಕು ಹೇಳಿದರು.
ಎರಡನೇ ಪ್ರಕರಣಗಳಿಗೆ ಸಂಬಂಧಿಸಿದಂತೆ 2,83,516 ರೂಪಾಯಿ ಹಣವನ್ನು ಆಕ್ಷೇಪಣೆಗೆ ತೀರ್ಮಾನಿಸಲಾಯಿತು. ಇದರಲ್ಲಿ ಅಳತೆ ಪುಸ್ತಕ ಇರುವುದಿಲ್ಲ ಮತ್ತು ಕಾಮಗಾರಿ ನಡೆದ ಸ್ಥಳವನ್ನು ತೋರಿಸಿಲ್ಲ. ಕಾಮಗಾರಿ ಕಡತ ಹಾಜರುಪಡಿಸದೆ ಇರುವುದು ಒಳಗೊಂಡಿರುತ್ತದೆ ಎಂದು ಹೇಳಿದರು.
ಸಾರ್ವಜನಿಕರು ಸಭೆಯಲ್ಲಿ ಎದ್ದು ನಿಂತು ಗ್ರಾಮದ ಪ್ರಮುಖ ಸಮಸ್ಯೆಗಳ ಕುರಿತು ಪ್ರಶ್ನಿಸಿದಾಗ, ಗ್ರಾ.ಪಂ ಸದಸ್ಯರು ಹಾಗೂ ಉಪಾಧ್ಯಕ್ಷರು ಸಾರ್ವಜನಿಕರ ಮೇಲೆ ಏಕವಚನದಲ್ಲಿ ಮಾತನಾಡಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಯಿತು. ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರಾದ ಹನುಮಪ್ಪ ಭೀಮನೂರ, ಬಸಪ್ಪ ಬಿಚಗಲ್ಲ್, ಭೀಮಪ್ಪ ಕಂಕರಿ, ಬಸಪ್ಪ ಗುಡಮಿ, ಚನ್ನಪ್ಪ ಗದಗ ಶಿವಕುಮಾರ ಯತ್ನಟ್ಟಿ, ರಾಮಣ್ಣ ಖಂಡ್ರೆ, ಹನುಮಪ್ಪ ತಳವಾರ, ಕಪ್ಪತ್ತಪ್ಪ ಸೋಂಪೂರ, ಮುದ್ದುಕಪ್ಪ ದೇವರವರ, ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಬಾಬರಿ ಆಗ್ರಹಿಸಿದ್ದಾರೆ.
ಕೃಷಿ ಇಲಾಖೆಯ ಅಧಿಕಾರಿ ವೀರಣ್ಣ ಗಡಾದ ಮಾತನಾಡಿ, ರೈತರಿಗೆ ಕೃಷಿ ಇಲಾಖೆಯಲ್ಲಿ ಅನೇಕ ಯಂತ್ರಗಳು ಬಂದಿವೆ. ಬೀಜಗಳು, ರಸಗೊಬ್ಬರ ಕೀಟನಾಶಕಗಳು ಸಬ್ಸಿಡಿ ದರದಲ್ಲಿ ಸಿಗುತ್ತಿವೆ. ಇವುಗಳ ಪ್ರಯೋಜ ಪಡೆಯಬಹುದು ಎಂದರು.



