ಸೋಶಿಯಲ್ ಮೀಡಿಯಾ ವಿದ್ಯಾರ್ಥಿ ಜೀವನಕ್ಕೆ ಅನಗತ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸೈಬರ್ ವಂಚನೆಯ ಬಲೆಗೆ ಒಳಗಾಗುವಂತೆ ಮಾಡುವ ಫೇಸ್‌ಬುಕ್, ವಾಟ್ಸಪ್, ಇನ್ಸ್ಟಾಗ್ರಾಂನಂತಹ ಹಲವಾರು ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿ ಜೀವನಕ್ಕೆ, ಮಹಿಳೆಯರಿಗೆ ಅವಶ್ಯಕತೆ ಇಲ್ಲ. ಇಂತಹ ವ್ಯವಸ್ಥೆಯಿಂದ ಹೊರಬಂದು ಉತ್ತಮ ಅಭ್ಯಾಸದ ಮೂಲಕ ಒಂದು ಒಳ್ಳೆಯ ಸಾಧನೆ ಮಾಡಬಹುದು ಎಂದು ಗದಗ ಲೋಕಾಯುಕ್ತ ಡಿವೈಎಸ್‌ಪಿ ವಿಜಯ ಬಿರಾದಾರ ಹೇಳಿದರು.

Advertisement

ಗದಗ ಜಿಲ್ಲೆಯ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಐಕ್ಯೂ ಎ.ಸಿ ಹಾಗೂ ರೆಡ್ ಕ್ರಾಸ್ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಸೈಬರ್ ಕಾನೂನು ಮತ್ತು ಭ್ರಷ್ಟಾಚಾರ ತಡೆಗಟ್ಟುವಿಕೆಯ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.

ಫೇಸ್‌ಬುಕ್ ಖಾತೆಯ ಮಾಹಿತಿಯ ಮೂಲಕ ನಿಮ್ಮ ಚಲನವಲನಗಳನ್ನು ಗಮನಿಸಿ ನಿಮ್ಮ ಮನೆ ಲೂಟಿ ಮಾಡುತ್ತಾರೆ. ಸೈಬರ್ ವಂಚಕರಿಂದ ಎಚ್ಚರವಾಗಿರಬೇಕಾದರೆ ನಿಮ್ಮ ಕುಟುಂಬದ ವಿಚಾರಗಳ ಪೋಸ್ಟ್ ಹಾಕಬಾರದು. ಎಪಿಕೆ ಲಿಂಕನ್ನು ಎಂದಿಗೂ ಡೌನ್‌ಲೋಡ್ ಮಾಡಬೇಡಿ. ಹೀಗೆ ಮಾಡಿದರೆ ಮಾಡಿದರೆ ನಿಮ್ಮ ಸಂಪೂರ್ಣ ಮೊಬೈಲ್ ಡಾಟಾ ಸೈಬರ್ ವಂಚಕರ ಕೈಸೇರುತ್ತದೆ. ವಿದ್ಯಾರ್ಥಿನಿಯರು ನಿಮ್ಮ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದು ಎಂದು ಎಚ್ಚರಿಕೆ ಹೇಳಿದರು.

ಪ್ರಾಂಶುಪಾಲ ಎಮ್.ಯು. ಹಿರೇಮಠ ಮಾತನಾಡಿ, ಸಂಸ್ಕಾರ, ಸಂಸ್ಕೃತಿಯ ಬದುಕನ್ನು ಕಟ್ಟಿಕೊಡುವ ಪ್ರತಿಯೊಬ್ಬ ಮಹಿಳೆಯರಿಗೆ ಮತ್ತು ಮನೆಯಲ್ಲಿರುವ ಮಹಿಳೆಯರಿಗೂ ನಾವು ನೀವೆಲ್ಲರೂ ಗೌರಯುತವಾಗಿ ನಡೆದುಕೊಂಡರೆ ಉತ್ತಮ ಕುಟುಂಬ, ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ಹೇಳಿದರು.

ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಪ್ರೀತಿ ಶಿವಪ್ಪನಮಠ ಮಾತನಾಡಿ, ಸಂವಿಧಾನದಲ್ಲಿ ಮತ್ತು ಭಾರತ ದೇಶದುದ್ದಕ್ಕೂ ಭಾರತೀಯ ಪರಂಪರೆಯಂತೆ ಮಹಿಳೆಯರಿಗೆ ಉತ್ತಮ ಗೌರವಯುತ ಸ್ಥಾನವನ್ನು ನೀಡಿರುವ ದೇಶ ನಮ್ಮದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ಯಾಜೆಟೆಡ್ ಮ್ಯಾನೇಜರ್ ಬಿ.ಎಫ್. ಕರಬುಡ್ಡಿ, ಡಾ. ಪ್ರಕಾಶ ದೇಶಪಾಂಡೆ, ಐಕ್ಯೂಎಸಿ ಸಂಯೋಜಕರಾದ ಪ್ರೊ. ಸತ್ತಾರ ಬಡೇಖಾನ್ನವರ, ಪ್ರೊ. ಪ್ರಕಾಶ ಕರಿಗಾರ, ಪ್ರೊ. ಎಸ್.ಯು. ಸಜ್ಜನಶೆಟ್ಟರ, ಡಾ. ಎಸ್.ಕೆ. ಪೂಜಾರ, ಪ್ರೊ. ಮಹಾಲಕ್ಷ್ಮಿ ಹುಟಗಿ, ಪ್ರೊ. ರೂಪಾ ಶ್ರೀನಿವಾಸ, ಪ್ರೊ. ಮಹಬೂಬಆರೀಫ ಸದರಸೋಪವಾಲೆ, ಪ್ರೊ. ಸತೀಶ ಸರ್ವಿ, ಪ್ರೊ. ದ್ಯಾಮಣ್ಣ ಮನಿಕಟ್ಟಿ, ಪ್ರೊ. ರಿಯಾಜಅಹ್ಮದ ದೊಡ್ಡಮನಿ, ಪ್ರೊ. ಪ್ರತಿಭಾ ಚವ್ಹಾಣ, ಪ್ರೊ. ಸುಮಿತ್ರಾ ಮೇದಾರ, ಪ್ರೊ. ವಹಿದಾ ಕಿಲ್ಲೆದಾರ, ಲಕ್ಷ್ಮಿ ನಾಗರಾಳ, ಶ್ರೀದೇವಿ, ಇನ್ನರ್‌ವ್ಹೀಲ್ ಕ್ಲಬ್‌ನ ಸದಸ್ಯರು, ವಿದ್ಯಾರ್ಥಿನಿಯರು ಇದ್ದರು.

ಮುಜಾಪರ, ರಾಜಸ್ಥಾನ, ಪಶ್ಚಿಮ ಬಂಗಾಳ, ಗುರಗಾಂವ್, ನೈಜೇರಿಯಾದಂತಹ ಭಾಗಗಳಿಂದ ಕುಳಿತುಕೊಂಡು ಸೈಬರ್ ವಂಚಕರು ವಂಚನೆ ಮಾಡುತ್ತಾರೆ. ವಂಚನೆಗೆ ಒಳಗಾದವರು ತಕ್ಷಣ 1930ಕ್ಕೆ ಕರೆ ಮಾಡಿ ಮೂಲಕ ಸೈಬರ್ ಕ್ರೈಂ ವಿಭಾಗದ ಸಿಬ್ಬಂದಿಗಳಿಗೆ ತಿಳಿಸಿ ಮತ್ತು ತಕ್ಷಣ ನಿಮ್ಮ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಿ ಖಾತೆಯನ್ನು ಬಂದ್ ಮಾಡಿಸಬೇಕು ಎಂದರಲ್ಲದೆ, ಯಾರಿಗೂ ಕೂಡಾ ಲಂಚ ಕೊಡಬೇಡಿ. ಲಂಚದ ಬೇಡಿಕೆಯಿಟ್ಟರೆ ಲೋಕಾಯುಕ್ತ ಕಚೇರಿಗೆ ಅರ್ಜಿ ಸಲ್ಲಿಸಿ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಿ ಎಂದು ವಿಜಯ ಬಿರಾದಾರ ತಿಳಿಸಿದರು.


Spread the love

LEAVE A REPLY

Please enter your comment!
Please enter your name here