ಮಾನವ ಹಕ್ಕುಗಳ ಪಾಲನೆಯಿಂದ ಸಾಮಾಜಿಕ ಕ್ರಾಂತಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಮಾನವ ಹಕ್ಕುಗಳಾಗಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

Advertisement

ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯಲ್ಲಿ ಸೋಮವಾರ ಏರ್ಪಡಿಸಿದ್ದ `ಕವಲು ದಾರಿಯಲ್ಲಿ ಮಾನವ ಹಕ್ಕುಗಳು:ಭಾರತ ಹಾಗೂ ಪಶ್ಚಿಮ’ ವಿಷಯದ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಸಂವಿಧಾನಾತ್ಮಕವಾಗಿ ಮಾನವ ಹಕ್ಕುಗಳನ್ನಾಗಿ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದರಿಂದಾಗಿ ಪ್ರತಿಯೊಬ್ಬರೂ ಸಹ ಗೌರವಯುತ ಜೀವನ ನಡೆಸುವಂತಾಗಲಿ. ಬಡತನ ಎಲ್ಲಿವರೆಗೂ ಇರುತ್ತದೆಯೋ ಅಲ್ಲಿವರೆಗೂ ಮಾನವ ಹಕ್ಕುಗಳಿಗೆ ಬೆಲೆ ಇಲ್ಲದಂತಾಗುತ್ತದೆ. ಸರ್ಕಾರ ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಬಡತನ ನಿರ್ಮೂಲನೆ ಮಾಡಿದೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಬಲವರ್ಧನೆಗೆ ಗ್ಯಾರಂಟಿಗಳು ಪೂರಕವಾಗಿವೆ ಎಂದು ತಿಳಿಸಿದರು.

1993ರಲ್ಲೇ ಮಾನವ ಹಕ್ಕುಗಳ ಆಯೋಗ ರಚನೆ ಮಾಡಲಾಗಿತ್ತು. ಆದರೆ, 2003ರವರೆಗೂ ನಿಯಮಾವಳಿಗಳೇ ರಚನೆ ಆಗದೆ ದೇಶದ ಯಾವುದೇ ರಾಜ್ಯದಲ್ಲಿ ಮಾನವ ಹಕ್ಕುಗಳು ಜಾರಿ ಆಗಲಿಲ್ಲ. 2003ರಲ್ಲಿ ರಾಜ್ಯ ಸರ್ಕಾರ ನಿಯಮಾವಳಿ ರಚನೆ ಮಾಡಿ ಜಾರಿ ಮಾಡಿದ ಮೊದಲ ರಾಜ್ಯವಾಯಿತು ಎಂದು ಹೇಳಿದರು.

ಕರ್ನಾಟಕ ರಾಜ್ಯದಲ್ಲಿ ಮಾನವ ಹಕ್ಕುಗಳ ನ್ಯಾಯಾಲಯವನ್ನು ಸ್ಥಾಪಿಸಿ, ಮಾನವ ಹಕ್ಕುಗಳ ರಕ್ಷಣೆಗೆ ಮುಂದಾಗಿದೆ. ಹಕ್ಕುಗಳ ಉಲ್ಲಂಘನೆಗಳನ್ನು ತಡೆದು ಮೂಲಭೂತ ಹಕ್ಕುಗಳ ರಕ್ಷಣೆಯೇ ನ್ಯಾಯಾಲಯ ಉದ್ದೇಶವಾಗಿದೆ. ಕಾಲ ಕಾಲಕ್ಕೆ ಮಾನವ ಹಕ್ಕುಗಳು ಬದಲಾವಣೆಯಾಗಿವೆ. ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ನೀಡಲಾಗಿದೆ. ಅದರಂತೆ ಶೈಕ್ಷಣಿಕ ಹಕ್ಕು, ಜೀವಿಸುವ ಹಕ್ಕು, ಆರೋಗ್ಯದ ಹಕ್ಕುಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ನಾಗರಿಕ ಸಮಾಜ ನಿರ್ಮಾಣದಲ್ಲಿ ಜನರ ಮೂಲಭೂತ ಹಕ್ಕುಗಳ ಮಹತ್ವ ಸಾರಬೇಕಿದೆ. ಮಾನವ ಹಕ್ಕುಗಳ ಪಾಲನೆಯಿಂದ ಸಾಮಾಜಿಕ ಕ್ರಾಂತಿಯಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಕಾನೂನು ಆಯೋಗದ ಸದಸ್ಯ ಎ.ಜೆ. ನಿಜಗಣ್ಣವರ, ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಬಸವರಾಜ, ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ ನಿರ್ದೇಶಕ ಸಿ.ಎಸ್. ಪಾಟೀಲ, ಕಾನೂನು ಆಯೋಗದ ಸದಸ್ಯ ಕಾರ್ಯದರ್ಶಿ ಧರ್ಮಗೌಡರ, ಬೆಂಗಳೂರು ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್.ದಶರಥ, ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿವಿ ಕುಲಸಚಿವ ಡಾ. ಎಸ್.ವಿ. ನಾಡಗೌಡರ, ವಿತ್ತಾಧಿಕಾರಿ ಪ್ರಶಾಂತ ಜೆ.ಸಿ ಉಪಸ್ಥಿತರಿದ್ದರು.

ಕಾನೂನು ಆಯೋಗದ ಅಧ್ಯಕ್ಷ ಡಾ. ಅಶೋಕ ಇಂಚಿಗೇರಿ ಮಾತನಾಡಿ, ನಿಜವಾದ ಮನುಷ್ಯರಾಗುವುದೇ ಮಾನವ ಹಕ್ಕಿನ ರಕ್ಷಣೆ ಆಗಿದೆ. ನೈತಿಕತೆಯನ್ನು ಬೆಂಬಲಿಸುವುದು, ಸ್ವತಂತ್ರವಾಗಿ ಬದುಕುವುದು ಮತ್ತು ಶಾಂತಿಯುತ ಸಮಾಜ ನಿರ್ಮಾಣಕ್ಕೆ ಮಾನವ ಹಕ್ಕುಗಳು ಎಂದು ಹೇಳಬಹುದು. ಎಲ್ಲ ಧರ್ಮಗ್ರಂಥಗಳಲ್ಲಿ ಮಾವನ ಹಕ್ಕುಗಳನ್ನು ಉಲ್ಲೇಖಿಸಲಾಗಿದೆ. ನಿಧನದ ನಂತರದ ಅಂತ್ಯಸಂಸ್ಕಾರವು ಕೂಡ ಇಚ್ಛೆಯಂತೆ ನಡೆಯಬೇಕು. ಅದು ಕೂಡ ಮಾನವ ಹಕ್ಕಾಗಿದೆ ಎಂದು ಹೇಳಿದರು.

“ಕಾನೂನು ನಿಯಮಗಳು, ಆಡಳಿತಾತ್ಮಕ ವಿಷಯ, ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಮಾನವ ಹಕ್ಕುಗಳ ರಕ್ಷಣೆ ಜಾಗೃತಿಗಾಗಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಂತಹ ಕಾರ್ಯಕ್ರಮದ ಅಗತ್ಯವಿದೆ. ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕರಾಗಿ ನಾವು ನಡೆದುಕೊಳ್ಳುತ್ತಿದ್ದೇವಾ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ”

– ಎಚ್.ಕೆ. ಪಾಟೀಲ.

ಕಾನೂನು, ಮಾನವ ಹಕ್ಕುಗಳು,

ಪ್ರವಾಸೋದ್ಯಮ ಸಚಿವರು.


Spread the love

LEAVE A REPLY

Please enter your comment!
Please enter your name here