ವಿಜಯಸಾಕ್ಷಿ ಸುದ್ದಿ, ಗದಗ: ಎಸ್ಎಸ್ಕೆ ಸಮಾಜದಲ್ಲಿ ಯುವ ನಾಯಕರನ್ನು ಗುರುತಿಸುವ ಕೆಲಸವಾಗಬೇಕು ಎಂದು ಯುವ ಮುಖಂಡ ಕೃಷ್ಣಗೌಡ ಎಚ್.ಪಾಟೀಲ ಹೇಳಿದರು.
ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಬಾಸ್ಕರಸಾ ಪವಾರ ಸಭಾಂಗಣದ ದಸರಾ ದರ್ಬಾರ ವೇದಿಕೆಯಲ್ಲಿ ಜರುಗಿದ ನಮ್ಮೂರ ದಸರಾ-2025ರ 7ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಒಳ್ಳೆಯ ಕೆಲಸ ಮಾಡುವ ಮೂಲಕ ಸಮಾಜದಲ್ಲಿ ಪರಿವರ್ತನೆ ಕಾಣಬಹುದು. ಎಸ್ಎಸ್ಕೆ ಸಮಾಜ ಬಾಂಧವರು ಇಂದಿನ ಯುವ ಪೀಳಿಗೆಯ ಬಗ್ಗೆ ಹೆಚ್ಚು ಚಿಂತನೆ ಮಾಡಬೇಕಿದೆ. ಸಮಾಜದ ಬಡ ಮಕ್ಕಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಕುರಿತು ಅಭಿಯಾನ ಹಮ್ಮಿಕೊಳ್ಳಬೇಕು. ಸಾಕಷ್ಟು ಯುವಕರಲ್ಲಿ ಕೌಶಲ್ಯದ ಕೊರತೆಯಿಂದಾಗಿ ಕೆಲಸ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ ಎಂದರು.
ಎಸ್ಎಸ್ಕೆ ಸಮಾಜದ ಪಂಚ ಕಮಿಟಿ ಅಧ್ಯಕ್ಷ ಫಕೀರಸಾ ಬಾಂಡಗೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಗಣ್ಯ ಉದ್ಯಮಿ ಎಸ್.ಡಿ. ಪವಾರ, ಗದಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಎಸ್ಎಸ್ಕೆ ಸಮಾಜ ಪಂಚ ಕಮಿಟಿ ಉಪಾಧ್ಯಕ್ಷ ರಾಜು ಬದಿ, ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಂಚ ಕಮಿಟಿ ಸದಸ್ಯರಾದ ಸುರೇಶಕುಮಾರ ಬದಿ, ಪರಶುರಾಮ ಬದಿ, ವಿಷ್ಣುಸಾ ಶಿದ್ಲಿಂಗ, ಮಾರುತಿ ಪವಾರ, ಪ್ರಕಾಶ ಬಾಕಳೆ, ಶ್ರೀನಿವಾಸ ಬಾಂಡಗೆ, ಅಂಬಾಸಾ ಖಟವಟೆ, ವಿನೋದ ಬಾಂಡಗೆ, ತರುಣ ಸಂಘದ ವಿಶ್ವನಾಥಸಾ ಸೋಳಂಕಿ, ರಾಘು ಬಾರಡ, ಶ್ರೀಕಾಂತ ಬಾಕಳೆ, ಸುಧೀರ ಕಾಟಿಗರ, ನಾಗರಾಜ ಖೋಡೆ, ಮಹಿಳಾ ಮಂಡಳದ ಅಧ್ಯಕ್ಷೆ ಉಮಾಬಾಯಿ ಬೇವಿನಕಟ್ಟಿ, ಗೀತಾಬಾಯಿ ಹಬೀಬ ಮುಂತಾದವರು ಇದ್ದರು.
ರವಿ ಶಿದ್ಲಿಂಗ ಸ್ವಾಗತಿಸಿದರು. ಜಿ.ಎನ್. ಹಬೀಬ ನಿರೂಪಿಸಿದರು. ಅನಿಲ್ ಖಟವಟೆ ವಂದಿಸಿದರು.
ಈ ಹಿಂದೆ ಬೃಹತ್ ಉದ್ಯೋಗ ಮೇಳದಲ್ಲಿ 1800 ಜನರು ಪಾಲ್ಗೊಂಡಿದ್ದರು. ಅವರಲ್ಲಿ 600 ಜನರಿಗೆ ಸ್ಥಳದಲ್ಲಿ ಆಯ್ಕೆ ಪ್ರಮಾಣಪತ್ರ ನೀಡಲಾಯಿತು. ಅದರಲ್ಲಿ 60 ಜನ ಯುವಕ-ಯುವತಿಯರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಇದು ನಮ್ಮಲ್ಲಿರುವ ಕೌಶಲ್ಯದ ಕೊರತೆಯನ್ನು ಎತ್ತಿ ತೋರಿಸುತ್ತಿದೆ. ಅದ್ದರಿಂದ ಇಂದಿನ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿ ಅಗತ್ಯವಾಗಿದೆ ಎಂದು ಕೃಷ್ಣಗೌಡ ಎಚ್.ಪಾಟೀಲ ಅಭಿಪ್ರಾಯಪಟ್ಟರು.