HomeGadag Newsವನ್ನಾಲರ ತ್ಯಾಗಕ್ಕೆ ಸಮಾಜ ಋಣಿಯಾಗಿದೆ

ವನ್ನಾಲರ ತ್ಯಾಗಕ್ಕೆ ಸಮಾಜ ಋಣಿಯಾಗಿದೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನೆಲದಲ್ಲಿ ನಡೆದ ನಾರಾಯಣ ವನ್ನಾಲ ಅವರ ಅಂಗಾಂಗ ದಾನದ ಘಟನೆ ಕೇವಲ ವೈದ್ಯಕೀಯ ಕ್ಷೇತ್ರದ ಯಶಸ್ಸು ಮಾತ್ರವಲ್ಲ, ಅದು ಮಾನವೀಯ ಮೌಲ್ಯಗಳ ಮರುಸ್ಥಾಪನೆಯಾಗಿ ಗದಗ ಜಿಲ್ಲೆಯಲ್ಲಿ ದಾಖಲೆಯಾಗಿ ಉಳಿದಿದೆ. ದುಃಖಭರಿತ ಕುಟುಂಬವೇ ತಮ್ಮ ದುಃಖವನ್ನೆಲ್ಲಾ ಮರೆತು, ನಾಲ್ಕು ಜೀವಗಳಿಗೆ ಹೊಸ ಆಶಾಕಿರಣ ನೀಡಿದ ತ್ಯಾಗವು, ಸಮಾಜ ಮತ್ತು ಸರ್ಕಾರ ಹೇಗೆ ಪ್ರತಿಕ್ರಿಯಿಸಬೇಕು ಎಂಬುದಕ್ಕೆ ಒಂದು ಆದರ್ಶಪ್ರಾಯ ಘಟನೆಯಾಗಿ ಹೊರಹೊಮ್ಮಿದೆ.

ಕಾನೂನು ಸಚಿವ ಎಚ್.ಕೆ. ಪಾಟೀಲರು ಈ ಘಟನೆಯ ಮಹತ್ವವನ್ನು ತಕ್ಷಣ ಅರಿತು ಅಂಗಾಗ ದಾನ ಮಾಡಿದವರ ಮನೆಗೆ ತೆರಳಿ ವಿಶೇಷ ಸಮಾಧಾನ ಹೇಳಿದ್ದಾರೆ. ಸಾಮಾನ್ಯವಾಗಿ ಇಂತಹ ಸನ್ಮಾನಗಳು ಸಾರ್ವಜನಿಕ ವೇದಿಕೆಗಳಲ್ಲಿ ನಡೆಯುತ್ತವೆ. ಆದರೆ, ನೋವಿನಲ್ಲಿ ಮುಳುಗಿರುವ ವನ್ನಾಲ ಕುಟುಂಬದವರು ವೇದಿಕೆಗೆ ಬರುವುದು ಅವರಿಗೆ ಇನ್ನಷ್ಟು ಕಷ್ಟ ನೀಡಬಹುದು ಎಂದು ಮನಗಂಡ ಸಚಿವರು, ತಾವೇ ಖುದ್ದಾಗಿ ವನ್ನಾಲ ಅವರ ಮನೆಗೆ ತೆರಳುವ ಅಪರೂಪದ ಮತ್ತು ಅತ್ಯಂತ ಸಂವೇದನಾಶೀಲ ನಿರ್ಧಾರ ಕೈಗೊಂಡರು.

ನಾಲ್ಕು ಜೀವಗಳಿಗೆ ಹೊಸ ಜೀವನ ನೀಡಿದ ಕುಟುಂಬದ ಮುಂದೆ ನಮ್ಮ ಗೌರವ ಅತಿ ಸಣ್ಣದು. ಆದರೆ, ಅವರ ತ್ಯಾಗಕ್ಕೆ ಪ್ರತಿಯಾಗಿ ಇಡೀ ಸಮಾಜ ಅವರಿಗೆ ಋಣಿಯಾಗಿದೆ ಎಂಬ ಭಾವನೆಯೊಂದಿಗೆ ಸಚಿವರು, ವನ್ನಾಲ ಅವರ ಪತ್ನಿ, ತಂದೆ ಮತ್ತು ತಾಯಿ ಅವರಿಗೆ ಗೌರವ ಸಲ್ಲಿಸಿ, ಸಾಂತ್ವನ ಹೇಳಿದರು. ರಾಜಕೀಯ ನಾಯಕರೊಬ್ಬರು ಅಧಿಕಾರದ ಚೌಕಟ್ಟನ್ನು ಮೀರಿ, ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಕುಟುಂಬದ ಮನೆಬಾಗಿಲಿಗೆ ಹೋಗಿ ಕೃತಜ್ಞತೆ ಸಲ್ಲಿಸಿದ್ದು, ಸಚಿವ ಎಚ್.ಕೆ. ಪಾಟೀಲರ ಸಂವೇದನಾಶೀಲ ಆಡಳಿತ ಮತ್ತು ಜನಪರ ಕಾಳಜಿಯ ಪ್ರತೀಕವಾಗಿ ನಿಂತಿದೆ. ಅವರ ಈ ನಡೆ, ಕುಟುಂಬದ ದುಃಖಕ್ಕೆ ಸ್ವಲ್ಪ ಮಟ್ಟಿಗಿನ ನೆಮ್ಮದಿಯನ್ನು ನೀಡಿದೆ.

ಈ ಮಹತ್ತರ ಕಾರ್ಯ ಯಶಸ್ವಿಯಾಗಲು ಕೆ.ಎಚ್. ಪಾಟೀಲ ಆಸ್ಪತ್ರೆಯ ವೈದ್ಯರ ತಂಡ ಮತ್ತು ಸಚಿವರ ಸೇವಾ ತಂಡದ ಸಮನ್ವಯ ಶ್ರಮ ಅಗಾಧ. ಡಾ. ಅವಿನಾಶ ಓದುಗೌಡರ ನೇತೃತ್ವದ ವೈದ್ಯಕೀಯ ತಂಡವು, ಸಕಾಲದಲ್ಲಿ ಅಂಗಾಂಗಳನ್ನು ಪಡೆದು, ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿತು. ಕಿಡ್ನಿ ಟ್ರಾನ್ಸ್ಪ್ಲಾಂಟ್ ವಿಭಾಗದ ಡಾ. ಭುವನೇಶ ಆರಾಧ್ಯ, ಡಾ. ಪವನ ಕೋಳಿವಾಡ, ಡಾ. ದೀಪಕ ಕುರಹಟ್ಟಿ, ಡಾ. ನಿಯಾಜ್, ಡಾ. ವಿನಾಯಕ ಪಂಚಗಾರ ಸೇರಿದಂತೆ ಸಂಪೂರ್ಣ ತಂಡವು ಗಡಿಯಾರದ ಮುಳ್ಳಿನೊಂದಿಗೆ ಸ್ಪಂದಿಸಿ ಕಾರ್ಯ ನಿರ್ವಹಿಸಿದ್ದು, ಅವರ ವೃತ್ತಿಪರ ಬದ್ಧತೆಯನ್ನು ಸಚಿವ ಪಾಟೀಲರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಅಂಗಾಂಗಳನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಶೀಘ್ರವಾಗಿ ತಲುಪಿಸಲು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಎಸ್ಪಿ ರೋಹನ್ ಜಗದೀಶ ಅವರು ಗ್ರೀನ್ ಕಾರಿಡಾರ್ (ಸಂಚಾರ ಮುಕ್ತ ದಾರಿ) ಏರ್ಪಾಡು ಮಾಡಿದ್ದು, ಸರ್ಕಾರಿ ಇಲಾಖೆಗಳು ಮಾನವೀಯ ಉದ್ದೇಶಕ್ಕಾಗಿ ಹೇಗೆ ಒಗ್ಗೂಡಬಹುದು ಎಂಬುದನ್ನು ಕೂಡಾ ಸಚಿವ ಎಚ್.ಕೆ. ಪಾಟೀಲರು ಈ ಪ್ರಕರಣದಲ್ಲಿ ತೋರಿಸಿಕೊಟ್ಟಿದ್ದಾರೆ.

ಈ ಅಪರೂಪದ ಸಂದರ್ಭದಲ್ಲಿ ಎಂ.ಆರ್. ಪಾಟೀಲ, ಡಾ. ಎಸ್.ಆರ್. ನಾಗನೂರು, ಡಾ. ಪ್ಯಾರಾಅಲಿ ನೂರಾನಿ, ಡಾ. ಪ್ರಭು ಮಡಿವಾಳರ, ಡಾ. ವಿಶಾಲ ಕಪ್ಪನವರ, ಎಚ್.ಕೆ. ಪಾಟೀಲ ಸೇವಾ ತಂಡದ ಅಧ್ಯಕ್ಷ ಪ್ರಭು ಬುರಬುರೆ, ರಂಗಣ್ಣ ಓದುಗೌಡ್ರ, ಡಾ. ವೇಮನ ಸಾಹುಕಾರ, ಅಶೋಕ ಮಂದಾಲಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ವನ್ನಾಲ ಕುಟುಂಬದ ಸಾಮಾಜಿಕ ಪ್ರೀತಿಯನ್ನು, ಅದಕ್ಕಾಗಿ ಆ ಕುಟುಂಬದ ತ್ಯಾಗವನ್ನು ಸ್ಮರಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!