ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸಮಾಜದಲ್ಲಿ ಹಿರಿಯರ ಪಾತ್ರ ಮುಖ್ಯವಾಗಿದ್ದು, ಅವರ ಮಾರ್ಗದರ್ಶನದಲ್ಲಿ ನಡೆದರೆ ಕಾರ್ಯಗಳು ಯಶಸ್ವಿಯಾಗುತ್ತವೆ. ಹಿರಿಯರು ಸಮಾಜ ಸೇವೆಯಲ್ಲಿ ತೊಡಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಹೇಳಿದರು.
ಅವರು ಪಟ್ಟಣದ ಕರ್ನಾಟಕ ಸರಕಾರಿ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಅಸೋಸಿಯೆಷನ್ ವತಿಯಿಂದ ಮಂಗಳವಾರ ನಡೆದ ಸಂಘದ ಮಾಸಿಕ ಸಭೆ ಹಾಗೂ ವಿಜಯಪುರ ಜ್ಞಾನ ಯೋಗಾಶ್ರಮದ ಪೂಜ್ಯ ಶಿದ್ದೇಶ್ವರ ಸ್ವಾಮಿಗಳ 2ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕರ್ನಾಟಕ ಸರಕಾರಿ ನಿವೃತ್ತ ನೌಕರರ ಕ್ಷೇಮಾಬಿವೃದ್ಧಿ ಅಸೋಸಿಯೆಷನ್ ಅವರು ಜಾಗದ ಬಗ್ಗೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಟ್ಟಿದ್ದು, ಅವುಗಳನ್ನು ಆಡಳಿತ ಮಂಡಳಿಯ ಗಮನಕ್ಕೆ ತಂದು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಹೇಳಿದರು.
ಅಸೋಸಿಯೇಷನ್ ಉಪಾಧ್ಯಕ್ಷ ಪಿ.ಬಿ. ಕರಾಟೆ ಮಾತನಾಡಿ, ಪೂಜ್ಯ ಶ್ರೀ ಶಿದ್ದೇಶ್ವರ ಮಹಾಸ್ವಾಮಿಗಳಳವರು ಬಿಟ್ಟು ಹೋದ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು. ಅದೇ ರೀತಿ ಸಂಘವು ಬಲಾಢ್ಯವಾಗುತ್ತ ಬಂದಿದ್ದು, ಸಭೆ ನಡೆಸಲು ಸರಿಯಾದ ಸ್ಥಳವಕಾಶ ಇಲ್ಲದಂತಾಗಿದೆ. ದಿನದಿಂದ ದಿನಕ್ಕೆ ಸದಸ್ಯರ ಸಂಖ್ಯೆ ಹೆಚ್ಚುತ್ತಿದ್ದು, ಆದಷ್ಟು ಬೇಗ ಪುರಸಭೆದವರು ಸಂಘಕ್ಕೆ ಜಾಗದ ವ್ಯವಸ್ಥೆ ಮಾಡಿಕೊಡಬೇಕು ಎಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಸಂಘದಿಂದ ಶೈಲಾ ಆದಿ, ನಿವೃತ್ತ ನೌಕರರ ಸಂಘದ ನೂತನ ಸದಸ್ಯರಾದ ಎ.ಬಿ. ತಿಮ್ಮಾಪುರ, ಎ.ವೈ. ನವಲಗುಂದ, ಗುರುಪಾದಪ್ಪ ಗಜೇಂದ್ರಗಡ, ಎಸ್.ಎನ್. ಹೊಸಮನಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಎಸ್. ಈಳಗೇರ, ಗೌರವಾಧ್ಯಕ್ಷ ಸಿ.ಜಿ. ಹಿರೇಮಠ, ಆರ್.ಎನ್. ಪಂಚಬಾವಿ, ಪ್ರ.ಕಾರ್ಯದರ್ಶಿ ಎಸ್.ವಿ. ಅಂಗಡಿ ಸೇರಿದಂತೆ ನಿವೃತ್ತ ನೌಕರರು ಇದ್ದರು. ಎ.ಎಮ್. ಮಠದ ನಿರೂಪಿಸಿದರು.